ಭಟ್ಕಳ ಬಿಜೆಪಿಯಿಂದ ಭರ್ಜರಿ ರೋಡ್ ಶೋ
ಭಟ್ಕಳ: ಬಹಿರಂಗ ಚುನಾವಣಾ ಪ್ರಚಾರದ ಅಂತಿಮ ದಿನವಾದ ಗುರುವಾರ ಭಟ್ಕಳದ ಬಿಜೆಪಿ ಅಭ್ಯರ್ಥಿ ಸುನಿಲ್ ನಾಯ್ಕ ಭರ್ಜರಿ ರೋಡ್ ಶೋ ಮೂಲಕ ಮತಬೇಡಿ ನಡೆಸಿದರು.
ಸಾವಿರಾರು ಯುವಕರು ರೋಡ್ ಶೋ ದಲ್ಲಿ ಭಾಗವಹಿಸಿ ಸುನಿಲ್ ನಾಯ್ಕರಿಗೆ ಬೆಂಬಲ ವ್ಯಕ್ತಪಡಿಸುತ್ತ ಮೋದಿ ಪರ ಘೋಷಣೆ ಕೂಗಿದರು.
ಬೃಹತ ಮೆರವಣಿಗೆಯ ಪೂರ್ವದಲ್ಲಿ ಇಲ್ಲಿನ ಹಳೆ ಬಸ್ ನಿಲ್ದಾಣದ ಪಕ್ಕದ ಮೈದಾನದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಬಿಜೆಪಿ ಹಿರಿಯ ಮುಖಂಡ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ ಚುನಾವಣೆಯ ಕೊನೆಯ ಅಸ್ತ್ರವಾಗಿ ಬಹಿರಂಗ ಪ್ರಚಾರ ಇಂದು ಅಂತ್ಯವಾಗಲಿದ್ದು, ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ವಾರ್ಡಗಳಲ್ಲಿ ತಾವೇ ಅಭ್ಯರ್ಥಿಗಳು ಎನ್ನುವ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು. ಈ ಬಾರಿ ಭಟ್ಕಳದಲ್ಲಿ ಬಿ.ಜೆ.ಪಿ. ಅಭ್ಯರ್ಥಿಯು ಗೆಲ್ಲಲೇ ಬೇಕು ಎಂದರಲ್ಲದೇ ಪ್ರತಿಯೋರ್ವ ಕಾರ್ಯಕರ್ತರೂ ಕೂಡಾ ಗೆಲುವು ನಮ್ಮದೇ ಎನ್ನುವ ರೀತಿಯಲ್ಲಿ ಕೆಲಸ ಮಾಡುವಂತೆ ಕರೆ ನೀಡಿದರು. 2018ರ ವಿಧಾನ ಸಭಾ ಚುನಾವಣೆಯ ಗೆಲುವು ಮುಂದಿನ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಬೇಕು ಎಂದು ಕರೆ ನೀಡಿದ ಅವರು ರಾಜ್ಯದಿಂದ ಕಾಂಗ್ರೆಸ್ ಕಿತ್ತೊಗೆಲು ಪ್ರತಿಯೋರ್ವರ ಸಹಕಾರ ಅಗತ್ಯ ಎಂದರು.
ಈ ಸಂಧರ್ಭದಲ್ಲಿ ಹೊನ್ನಾವರ-ಮಂಕಿ ಮಂಡಲಾಧ್ಯಕ್ಷ ಸುಬ್ರಾಯ ನಾಯ್ಕ, ಭಟ್ಕಳ ಮಂಡಲ ಅಧ್ಯಕ್ಷ ರಾಜೇಶ ನಾಯ್ಕ, ಶಿವಾನಿ ಶಾಂತಾರಾಮ, ಗಣಪತಿ ನಾಯ್ಕ ಜಾಲಿ, ಸುಬ್ರಾಯ ದೇವಡಿಗ, ಪ್ರಮೋದ ಜೋಶಿ, ಈಶ್ವರ ಎನ್. ನಾಯ್ಕ ಸೇರಿದಂತೆ ಬಿಜೆಪಿ ಹಿರಿಯ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.