ಭಟ್ಕಳ: ತಾಲ್ಲೂಕಿನ ಬೇಂಗ್ರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇಂಗ್ರೆ- 2 ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿರುವುದಕ್ಕೆ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೋಮವಾರ ಪಂಚಾಯ್ತಿ ಕಾರ್ಯಾಲಯದ ಆವರಣದಲ್ಲಿ ಸಭೆ ನಡೆಸಿದ ಅವರು, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ರೂಪುರೇಷೆ ಸಿದ್ದಗೊಳಿಸಿರುವ ಮಾಹಿತಿ ನಮಗೆ ದೊರಕಿದೆ. ಸದರಿ ಜಾಗದ ಸುತ್ತ ಜನವಸತಿ ಪ್ರದೇಶವಿದೆ. ನೂರಾರು ಎಕರೆ ಕೃಷಿಭೂಮಿ ಇದೆ. ಘಟಕ ನಿರ್ಮಾಣವಾದಲ್ಲಿ ದುರ್ವಾಸನೆಯಿಂದ ರೋಗ ಹರಡುವ ಭೀತಿ ಇದೆ ಎಂದು ಒಕ್ಕೋರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ತ್ಯಾಜ್ಯದ ಹೊಲಸು ನೀರು, ಕಸಕಡ್ಡಿ, ಪ್ಲಾಸ್ಟಿಕ್ ಇತ್ಯಾದಿ ಮಳೆ ನೀರಿನೊಂದಿಗೆ ಕೃಷಿಭೂಮಿ ಆವರಿಸಿಕೊಳ್ಳಲಿದೆ. ಇದರಿಂದ, ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತದೆ. ತ್ಯಾಜ್ಯ ಘಟಕವನ್ನು ಯಾವುದೇ ಕಾರಣಕ್ಕೂ ಇಲ್ಲಿ ಸ್ಥಾಪಿಸಲು ಅವಕಾಶ ನೀಡಬಾರದು ಎಂದು ನಿರ್ಧರಿಸಿದರು.
ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ವಿರೋಧಿಸಿ, ಮೊದಲ ಹಂತವಾಗಿ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದು. ಇದಕ್ಕೆ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಬೇಂಗ್ರೆ ಪಂಚಾಯ್ತಿ ಅಧ್ಯಕ್ಷ ವೆಂಕ್ಟಯ್ಯ ಭೈರುಮನೆ, ಉಪಾಧ್ಯಕ್ಷ ಮಂಜುನಾಥ ಮೊಗೇರ್ ಸೇರಿದಂತೆ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮಪಂಚಾಯ್ತಿ ಸದಸ್ಯರು ಹಾಜರಿದ್ದರು.