ಭಟ್ಕಳ: ಅಂಜುಮನ್ ಮಾಜಿ ಕಾರ್ಯದರ್ಶಿ ಮೊಹಸಿನ್ ಖರೂರಿ ನಿಧನ
ಭಟ್ಕಳ: ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ ಮೋಹಸಿನ್ ಖರೂರಿ(59) ಶುಕ್ರವಾರ ತಡರಾತ್ರಿ ಮದೀನಾ ಕಾಲೋನಿಯ ತಮ್ಮ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾದರು.
ಓರ್ವ ಪುತ್ರ ಹಾಗೂ ಪುತ್ರಿ, ಪತ್ನಿ ಸೇರಿದಂತೆ ಅಪಾರ ಬಂದುಮಿತ್ರರನ್ನು ಅವರು ಅಗಲಿದ್ದಾರೆ.
ಮೋಹಸಿನ್ ಖರೂರಿ ಅಂಜುಮನ್ ಸಂಸ್ಥೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಸಧ್ಯ ಅಂಜುಮನ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಇವರು ಸಂಸ್ಥೆಯ ಶತಮಾನೋತ್ಸವ ಸಮಾರಂಭದ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ನವಾಯತ್ ಕಾಲೋನಿಯ ಮಿಲ್ಲಿಯಾ ಜಾಮಿಯಾ ಮಸೀದಿಯಲ್ಲಿ ಶನಿವಾರ ನಡೆದ ಅಂತಿಮ ಪ್ರಾರ್ಥನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಅವರ ಅಂತಿಮ ದರ್ಶನ ಪಡೆದರು.
ಇವರ ನಿಧನಕ್ಕೆ ಅಂಜುಮನ್ ಸಂಸ್ಥೆ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ, ತಂಝೀಮ್, ಜಮಾಅತೆ ಇಸ್ಲಾಮಿ ಹಿಂದ್ ತರಬಿಯತ್ ಎಜ್ಯುಕೇಶನ್ ಸೂಸೈಟಿ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು, ಸಂಘಸಂಸ್ಥೆಗಳು ಸಂತಾಪವನ್ನು ಸೂಚಿಸಿದ್ದಾರೆ.