ಭಟ್ಕಳ:ತಾಲ್ಲೂಕಿನಾದ್ಯಂತ ಸುಮಾರು 50ಕ್ಕೂ ಅಧಿಕ ಕೆಂಪುಕಲ್ಲು ಗಣಿಗಾರಿಕೆ ಅನುಮತಿ ಇಲ್ಲದೆ ಅಕ್ರಮವಾಗಿ ನಡೆಯುತ್ತಿದ್ದು,ಬಳ್ಳಾರಿಯಲ್ಲಿ ಅದಿರು ಗಣಿಗಾರಿಕೆ ನಡೆದಿದ್ದರೆ ಭಟ್ಕಳದಲ್ಲಿ ಕೆಂಪುಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು,ಭಟ್ಕಳ ಮತ್ತೊಂದು ಬಳ್ಳಾರಿ ಆಗಲಿದೆಯೇ ಎಂಬ ಅನುಮಾನ ಎದುರಾಗಿದೆ.
ತಾಲ್ಲೂಕಿನ ಬೆಂಗ್ರೆ ಪಂಚಾಯಿತಿಯ ಮಲ್ಲಾರಿಯಲ್ಲಿ ಸುಮಾರು 10ಕ್ಕೂ ಅಧಿಕ ಕೆಂಪುಕಲ್ಲ ಗಣಿಗಾರಿಕೆ ನಡೆಯುತ್ತಿದ್ದು ಮಳೆಗಾಲದ ಹಿನ್ನಲೆಯಲ್ಲಿ ಸ್ಥಗಿತಗೊಂಡಿವೆ. ತಾಲ್ಲೂಕಿನ ಎಲ್ಲಾ ಗಣಿಗಾರಿಕೆಗಳು ಅನಧಿಕೃತವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಅಸಾಯಕರಾಗಿದ್ದಾರೆ. ಹಲವಡೆ ಮಾಲ್ಕಿ ಜಾಗದಿಂದ ಅರಣ್ಯ ಇಲಾಖೆಯ ಸ್ಥಳವನ್ನು ಆಕ್ರಮಿಸಿಕೊಂಡು ಗಣಿಗಾರಿಕೆ ನಡೆಸುತ್ತಿರುವ ಮಾಹಿತಿ ಇದೆ.
ಎಲ್ಲೆಲ್ಲಿ ಗಣಿಗಾರಿಕೆ: ತಾಲ್ಲೂಕಿನ ಬೈಲೂರು, ಕಾಯ್ಕಿಣಿ, ಮಾವಳ್ಳಿ, ಶಿರಾಲಿ,ಬೆಂಗ್ರೆ, ಕೊಪ್ಪ, ಜಾಲಿ, ಮುಟ್ಟಳ್ಳಿ, ಯಲ್ವಡಿಕವೂರು, ಬೆಳಕೆ, ಹಾಡುವಳ್ಳಿ, ಕೋಣಾರ, ಮಾರುಕೇರಿಯಲ್ಲಿ ಒಟ್ಟು 50ಕ್ಕೂ ಅಧಿಕ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಹಲವು ಮಾಲ್ಕಿ ಜಾಗದಲ್ಲಿ ಇದ್ದರೂ ಗಣಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕೆಲವಡೆ 30 -40ಅಡಿಯವರೆಗೂ ಹೊಂಡ ತೊಡಲಾಗಿದ್ದು ಮಳೆಗಾಲದಲ್ಲಿ ನೀರು ತುಂಬಿಕೊಂಡಿದ್ದು ಕೃತಕ ಕೆರೆಯ ನಿರ್ಮಾಣವಾಗಿದೆ.
ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ತಲಾಂದ್ ಬಳಿಯಲ್ಲಂತೂ ರಸ್ತೆಯ 2 ಬದಿಯಲ್ಲೂ ಗಣಿಗಾರಿಕೆ ಮಾಡಿದ ಕುರುಹು ಎದ್ದು ಕಾಣುತ್ತಿದೆ. ಮಳೆಗಾಲದಲ್ಲಿ ನೀರು ತುಂಬಿಕೊಂಡು ಈ ಗುಂಡಿಗಳು ಯಾವ ಜಲಾಶಯಕ್ಕೂ ಕಮ್ಮಿ ಇಲ್ಲದಂತೆ ಬಾಸವಾಗುತ್ತಿದೆ. ಶಾಲಾ ಬಾಲಕರು ಶಾಲೆಗೆ ತೆರಳುವಾಗ ನೀರಿನಲ್ಲಿ ಆಟವಾಡುವುದು, ಕಲ್ಲು ಎಸೆಯುವದು ಈಜಲು ತೆರಳುವದು ಮಾಡುತ್ತಿದ್ದರೂ ಸಂಬಂಧಿಸಿದ ಇಲಾಖೆ ಮಾತ್ರ ಈ ಕುರಿತು ಯಾವುದೆ ಕ್ರಮ ಕೈಗೊಂಡಿಲ್ಲ. ಇಲ್ಲಿ ಸುತ್ತಲೂ ಸಾರ್ವಜನಿಕರ ವಾಸ ಇರುವದರಿಂದ ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ಅಪಾಯ ಕಟ್ಟಿಟ್ಟ
ಬುತ್ತಿಯಾಗಿದೆ.
ಮಲ್ಲಾರಿಯಲ್ಲಿ ಕಾರ್ಮಿಕನ ಸಾವು: ತಾಲ್ಲೂಕಿನಲ್ಲಿ ಕೆಂಪುಕಲ್ಲು ಗಣಿ ಕೈಗಾರಿಕೆಯಿಂದ ಹೆಚ್ಚಿನ ಅಪಾಯ ಸಂಭವಿಸದಿದ್ದರೂ ಸುಮಾರು 2 ವರ್ಷಗಳ ಹಿಂದೆ ಮಲ್ಲಾರಿಯಲ್ಲಿ ವ್ಯಕ್ತಿಯೊರ್ವರು ಮಣ್ಣಿನಡಿಯಲ್ಲಿ ಬಿದ್ದು ಮೃತಪಟ್ಟಿದ್ದರು. ತಾಲ್ಲೂಕಿನ ಜೀವಂತ ಕ್ವಾರಿಗಳು ಇಂದಿಗೂ ಪ್ರಾಣಿ,
ಮನುಷ್ಯರ ಜೀವಬಲಿಗೆ ಕಾಯುತ್ತಿವೆ. ಗಣಿಗಾರಿಕೆ ಮುಗಿದ ಮೇಲಾದರೂ ಅದರಲ್ಲಿ ಮಣ್ಣು ತುಂಬಿ ಮುಚ್ಚುವ ಕೆಲಸಕ್ಕೆ ಮುಂದಾಗದಿರುವದು
ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೇಸಿಗೆ ಸಮಯದಲ್ಲಿ ಕಂದಾಯ ಇಲಾಖೆ ಹತ್ತಾರು ಬಾರಿ ದಾಳಿ ನಡೆಸಿ ಕಲ್ಲುಕ್ವಾರಿಗಳನ್ನು ಬಂದ್ ಮಾಡಿಸಿದರೂ ಮಾರನೆ ದಿನವೆ ಮತ್ತೆ ಜೆಸಿಬಿ ಸದ್ದು ಮಾಡಲಾರಂಭಿಸುತ್ತದೆ. ಅಧಿಕಾರಿಗಳ ನೋಟಿಸ್ಗೂ ಬೆದರದ ಗಣಿ ಉದ್ಯಮಿಗಳು ದಿನೆ ದಿನೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.
ಮಳೆಗಾಲದಲ್ಲೂ ನಿರಂತರ: ತಾಲ್ಲೂಕಿನಲ್ಲಿ ಸುಮಾರು 50ಕ್ಕೂ ಅಧಿಕ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿದೆ.ಆದರೆ ಮಳೆಗಾಲದಲ್ಲಿ ಕೆಲವು ನೀರು ತುಂಬಿ ಬಹುತೇಕ ಸ್ಥಗಿತಗೊಂಡಿದ್ದರೆ 10ಕ್ಕೂ ಅಧಿಕ ಗಣಿಗಾರಿಕೆಗಳು ಮಳೆಗಾಲದಲ್ಲೂ ನಿರಾತಂಕವಾಗಿ ನಡೆಯುತ್ತವೆ. ಮಳೆಗಾಲದಲ್ಲಿ ಅಪಾಯದ ಮಟ್ಟವೂ ಹೆಚ್ಚಿದೆ. ಕಾರ್ಮಿಕರು ಕೆಲಸಮಾಡುವಾಗ ಮಣ್ಣು ಕುಸಿದು ಬೀಳುವ ಸಂಭವವಿದೆ. ಕಲ್ಲುಕಟ್ಟು ಮಾಡುವ ಯಂತ್ರಗಳು ಹೊರಸುಸುವ ಶಬ್ದ ಕಾರ್ಮಿಕರ ಜೀವಬಲಿ ಪಡೆಯುವ ಸಾಧ್ಯತೆಗಳಿವೆ. ಆದರೆ ಇಲ್ಲಿ ಎಲ್ಲಾ ನಿರ್ಲಕ್ಷ್ಯ. ಹಣಗಳಿಸುವ ವ್ಯಾಮೋಹವೊಂದೆ ನಿತ್ಯ ಸತ್ಯ.
ಭಟ್ಕಳ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ಬಗ್ಗೆ ಪರಿಶೀಲಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ನೀಡಲಾಗಿದೆ.ಅಲ್ಲದೇ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಭೂ ಮಾಲಕರಿಗೆ ನೋಟಿಸ್ ನೀಡಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ವಿ.ಎನ್ ಬಾಡಕರ್ ತಿಳಿಸಿದ್ದಾರೆ.
ವರದಿ:ವಿಷ್ಣು ದೇವಾಡಿಗ