• ವಿವಿಧ ಗಣ್ಯರಿಂದ ಅಭಿನಂದನೆಗಳ ಮಹಾಪೂರ
ಭಟ್ಕಳ: ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಮತ್ತು ಮ್ಯಾನೇಜ್ಮೆಂಟ್ನ ಎಂ.ಬಿ.ಎ ವಿಭಾಗದ ವಿದ್ಯಾರ್ಥಿನಿ ಮುಷ್ಫಿರಾ ಬಿನ್ತೆ ವಖಾರ್ ಆಹಮದ್ ಶಾಬಂದ್ರಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 9ನೇ ರ್ಯಾಂಕ್ ಪಡೆದುಕೊಂಡು ಸಂಸ್ಥೆಗೆ ಹೆಸರನ್ನು ತಂದಿದ್ದಾಳೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಮುಷ್ತಾಖ್ ಆಹಮದ್ ಭಾವಿಕಟ್ಟಿ, ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ಮುಷ್ಫಿರಾ ಶಾಬಂದ್ರಿ 2016ರಲ್ಲಿ ಎರಡು ವರ್ಷದ ಎಂ.ಬಿ.ಎ ಕೋರ್ಸ್ಗಾಗಿ ತಮ್ಮ ಸಂಸ್ಥೆಯಲ್ಲಿ ಪ್ರವೇಶ ಪಡೆದುಕೊಂಡಿದ್ದು 2018ರಲ್ಲಿ ಜರಗಿದ ಅಂತಿಮ ವರ್ಷದ ಪರೀಕ್ಷೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಒಟ್ಟು 8.57ಸಿಜಿಪಿಎ ಅಂಕಗಳೊಂದಿಗೆ 9ನೇ ರ್ಯಾಂಕ್ ಪಡೆದುಕೊಂಡು ಸಂಸ್ಥೆಗೆ ಗೌರವವನ್ನು ತಂದುಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಷ್ಫಿರಾ ತನ್ನ ಈ ಯಶಸ್ಸಿಗೆ ಮಾತಾಪಿತ ಹಾಗೂ ಉಪನ್ಯಾಸಕ ವರ್ಗದ ಶ್ರಮವೇ ಕಾರಣವಾಗಿದ್ದು ನಿರಂತರ ಪ್ರೋತ್ಸಾಹದಿಂದಾಗಿ ತನಗೆ ರ್ಯಾಂಕ್ ಬರಲು ಕಾರಣವಾಯಿತು ಎಂದಿದ್ದಾರೆ.
ವಿಟಿಯು ಅಡಿ ರಾಜ್ಯದ 200ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಂದ 25ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು ಇದರಲ್ಲಿ ಅತ್ಯುತ್ತಮ ಸಾಧನೆಗೈದು ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ವಿದ್ಯಾರ್ಥಿನಿಯ ಸಾಧನೆಗಾಗಿ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ, ಪ್ರಧಾನ ಕಾರ್ಯದರ್ಶಿ ಸಿದ್ದಿಖ್ ಇಸ್ಮಾಯಿಲ್, ಸಮಾಜದ ಮುಖಂಡರಾದ ಎಸ್.ಎಂ.ಸೈಯ್ಯದ್ ಖಲಿಲುರ್ರಹ್ಮಾನ್, ತಂಝೀಮ್ ಸಂಸ್ಥೆಯ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ, ಪ್ರ.ಕಾ. ಮುಹಿದ್ದೀನ್ ಅಲ್ತಾಫ್ ಖರೂರಿ, ಕೆನರಾ ಮುಸ್ಲಿಮ್ ಖಲಿಝ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಅಬೂ ಮುಹಮ್ಮದ್ ಮುಖ್ತಸರ್, ಮಂಕಿ ಕಮ್ಯುನಿಟಿ ದುಬೈಯ ಪ್ರಧಾನ ಕಾರ್ಯದರ್ಶಿ ಆಬಿದೀನ್ ಅಬುಹುಸೈನ, ಮುಹಮ್ಮದ್ ಫೈಝಾನ್ ಸೌಡಾ ಸೇರಿದಂತೆ ಪ್ರಾಂಶುಪಾಲರು ಉಪನ್ಯಾಸಕ ವರ್ಗ ಮತ್ತಿರರ ಸಂಘಸಂಸ್ಥೆಗಳ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.