ಭಟ್ಕಳ: ಭಟ್ಕಳದಲ್ಲಿ ಹಲವು ದಶಕಗಳಿಂದ ಕೆಲವು ಮೂಲಭೂತ ಸೌಕರ್ಯ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸರಕಾರ ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಜ್ಲಿಸೇ ಇಸ್ಲಾ ವ ತಂಜೀಮ್ ಮತ್ತು ಅತಿಕ್ರಮಣ ಹೋರಾಟ ಸಮಿತಿಯ ಸದಸ್ಯರು ಉಪಮುಖ್ಯಮಂತ್ರಿ ಪರಮೇಶ್ವರರವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಭಟ್ಕಳದಲ್ಲಿ ಕಳೆದ 20-30 ವರ್ಷಗಳಿಂದ ಅರಣ್ಯ ಭೂಮಿಯನ್ನು ಅತಿಕ್ರಮಿಸಿಕೊಂಡು ಜನರು ವಾಸವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರವು ಕಾರ್ಯಾಚರಣೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಅರ್ಜಿಯ ಸಮರ್ಪಕ ವಿಲೇವಾರಿಯಾಗುತ್ತಿಲ್ಲ. ಅಧಿಕಾರಿಗಳ ಇಲ್ಲದ ಸಬೂಬು ಹೇಳುತ್ತಿದ್ದಾರೆ. ಅರಣ್ಯ ಅಧಿಕಾರಿಗಳು 1 ಗುಂಟೆ ಹಿಡುವಳಿ ಇದ್ದರೂ ಅತಿಕ್ರಮಣದಾರರ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದು ಸರಿಯಾದ ಕ್ರಮ ಅಲ್ಲ. ಅರಣ್ಯ ಹಕ್ಕು ಕಾಯ್ದೆಯಡಿ ಈ ಕುರಿತು ಯಾವುದೇ ಪ್ರಸ್ತಾವನೆ ಇರುವುದಿಲ್ಲ. ಉತ್ತರಕನ್ನಡ ಜಿಲ್ಲಾಧಿಕಾರಿಗಳು ಭಟ್ಕಳ ತಾಲೂಕಿನ 4500 ಅರ್ಜಿಯನ್ನು ಅರಣ್ಯ ಹಕ್ಕು ಕಾನೂನಿಗೆ ವ್ಯತಿರಿಕ್ತವಾದ ಕಾರಣಗಳಿಗಾಗಿ ತಿರಸ್ಕರಿಸಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅತಿಕ್ರಮಣ ಹೋರಾಟ ಸಮಿತಿ ಪರವಾಗಿ ಸಂಘಟನೆಯ ಅಧ್ಯಕ್ಷ ರಾಮಾ ಮೊಗೇರ ಉಪಸ್ಥಿತರಿದ್ದರು. ತಂಝೀಮ್ ಸಲ್ಲಿಸಿರುವ ಮನವಿಯಲ್ಲಿ ಭಟ್ಕಳ ಶಹರ ವ್ಯಾಪ್ತಿಯ ಯುಜಿಡಿ, ವಿದ್ಯುಚ್ಛಕ್ತಿ, ಪುರಾತತ್ವ ಇಲಾಖೆಯ ಕಾನೂನು ಸಮಸ್ಯೆ ಪರಿಹಾರವನ್ನು ಪ್ರಸ್ತಾಪಿಸಲಾಗಿದೆ. ಭಟ್ಕಳದಲ್ಲಿ ಹೌಸಿಂಗ್ ಕಾಲೋನಿ ನಿರ್ಮಿಸುವ ಬಗ್ಗೆ ಹಾಗೂ ಪುರಸಭೆಯನ್ನು ನಗರಸಭೆಯನ್ನಾಗಿ ಪರಿವರ್ತಿಸುವಂತೆಯೂ ತಂಜೀಮ್ ಸದಸ್ಯರು ಆಗ್ರಹಿಸಿದ್ದಾರೆ. ತಂಝೀಮ್ ಉಪಾಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಕಾರ್ಯದರ್ಶಿ ಆಲ್ತಾಫ್ ಖರೂರಿ, ಸಿದ್ದಿಕ್ ಡಿ.ಎಫ್., ಇಮ್ರಾನ್ ಲಂಕಾ, ಬುರಾನ್ ಕೆ.ಎಮ್. ಮೊದಲಾದವರು ಉಪಸ್ಥಿತರಿದ್ದರು.