ಭಟ್ಕಳ: ನ್ಯಾಯವಾದಿಗಳು ದೇಶದ ಕುರಿತು, ದೇಶದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಚಿಂತನ ಮಂಥನ ನಡೆಸಬೇಕು ಎಂದು ಹಿರಿಯ ನ್ಯಾಯವಾದಿ ಕುಂದಾಪುರದ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.
ಅವರು ಇಲ್ಲಿನ ಬಾರ್ ಅಸೋಶಿಯೇಶನ್ನಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಹಾಗೂ ನ್ಯಾಯವಾದಿ ಶಂಕರ ನಾಯ್ಕ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.
ವಕೀಲರು, ಬರೆಯುವುದು, ಓದುವುದು, ಚಿಂತಿಸುವುದು ಮಾಡುತ್ತಲೇ ಇರಬೇಕಾಗುವುದು ಎಂದು ಎಂದಿನ ತಮ್ಮ ಹಾಸ್ಯ ಚಟಾಕಿಯೊಂದಿಗೆ ಮಾತನಾಡಿದ ಅವರು ವೈದ್ಯರು, ಇಂಜಿನಿಯರ್ಗಳು, ಶಿಕ್ಷಕರು ಎಲ್ಲರೂ ಕೂಡಾ ಅವರವರ ವೃತ್ತಿಯ ಗುರುತನ್ನು ಹೊಂದಿರುತ್ತಾರೆ. ಆದರೆ ಓರ್ವ ವಕೀಲ ಎಲ್ಲವನ್ನೂ ಮಸ್ತಕದಲ್ಲಿಟ್ಟುಕೊಂಡು ಚಾಣಾಕ್ಷತನದಿಂದ ವಾದವನ್ನು ಮಂಡಿಸಿ ಗೆಲ್ಲುತ್ತಾನೆ ಎಂದರು. ವಕೀಲರಿಗೆ ಚಾಲಚಕ್ಯತೆ ಹಾಗೂ ವಿಚಾರ ಮಾಡುವ ಶಕ್ತಿ ಮುಖ್ಯವಾದುದು ಎಂದು ಹೇಳಿದ ಅವರು ವಕೀಲರೇ ಇಲ್ಲವಾದಲ್ಲಿ ಅನೇಕರು ಜೈಲಿನಲ್ಲಿ ಇರಬೇಕಾಗಿತ್ತು. ಸಮಾಜದಲ್ಲಿ ವಕೀಲರು ಇರುವುದರಿಂದ ಅನೇಕ ವ್ಯಕ್ತಿಗಳಿಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ.
ಪ್ರಪಂಚದಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆಯು ವಕೀಲರ ಪ್ರತಿಮೆ ಎನ್ನುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಇತ್ತೀಚೆಗೆ ಅನಾವರಣಗೊಂಡ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಉದಾಹರಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ವಕೀಲರ ಹೆಜ್ಜೆಗುರುತನ್ನು ಗುರುತಿಸಿದ ಅವರು ನಮ್ಮ ದೇಶದ ಸಾಂಸ್ಕøತಿಕ ಪರಂಪರೆಯನ್ನು ರಕ್ಷಿಸುವಲ್ಲಿ ಕೂಡಾ ವಕೀಲರ ಪಾತ್ರ ಹಿರಿದು ಎಂದರಲ್ಲದೇ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ನೀಡಿದ ಶಬರಿಮಲೆ ಬಗೆಗಿನ ತೀರ್ಪಿನ ಕುರಿತು ಮಾತನಾಡಿದ ಅವರು ನಮ್ಮ ಭಾರತದ ಭವ್ಯ ಪರಂಪರೆ, ಸಂಸ್ಕøತಿಯನ್ನು ಮುರಿಯುವುದಕ್ಕೆ ಇಂತಹ ತೀರ್ಪುಗಳು ಬರುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕಮಲಾಕರ ಭೈರುಮನೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯವಾದಿ ಶಂಕರ ಕೆ. ನಾಯ್ಕ ತನ್ನ ವೃತ್ತಿ ಜೀವನದಲ್ಲಿ ಪಟ್ಟ ಕಷ್ಟವನ್ನು ವಿವರಿಸುತ್ತಾ, ಭಟ್ಕಳ ನ್ಯಾಯಾಲಯದಲ್ಲಿ ತಮಗೆ ಸಹಕರಿಸಿದವರನ್ನು ಸ್ಮರಿಸಿದರು. ಅನೇಕ ಸಂದರ್ಭಗಳಲ್ಲಿ ವಕೀಲರುಗಳು ಸಂಕಷ್ಟಕ್ಕೆ ಸಿಲುಕಿದಾಗ ಹಣದ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭವನ್ನು ಎದುರಿಸಲು ಸಂಕಷ್ಟ ಪರಿಹಾರ ನಿಧಿಯನ್ನು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ನ್ಯಾಯವಾದಿ ಆರ್. ಆರ್. ಶ್ರೇಷ್ಟಿ, ಎಂ. ಎಲ್. ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ, ಮಾಜಿ ಶಾಸಕ ಜೆ.ಡಿ.ನಾಯ್ಕ ಉಪಸ್ಥಿತರಿದ್ದರು. ನ್ಯಾಯವಾದಿ ನಾರಾಯಣ ಯಾಜಿ, ಧಾರವಾಡದ ನ್ಯಾಯವಾದಿ ಮುತಾಲಿಕ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ನ್ಯಾಯವಾದಿ ರಾಜೇಶ ನಾಯ್ಕ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವನ್ನು ನಿರ್ವಹಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಗಣೇಶ ದೇವಡಿಗ ಸ್ವಾಗತಿಸಿದರು. ನ್ಯಾಯವಾದಿ ಜಿ.ಟಿ.ನಾಯ್ಕ ನಿರೂಪಿಸಿದರು. ಎಂ.ಜೆ.ನಾಯ್ಕ ವಂದಿಸಿದರು.