ಭಟ್ಕಳ: ದೇಶದ ಬೆಳವಣಿಗೆಯು ಅತ್ಯಂತ ವೇಗವಾಗಿ ಆಗುತ್ತಿದ್ದು ಅದಕ್ಕೆ ಪೂರಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯು ಪ್ರತಿ ವರ್ಷಕ್ಕೆ ಶೇ.7ರಿಂದ ಶೇ.9ರಷ್ಟು ಹೆಚ್ಚಾಗುತ್ತಿದೆ. ಇದನ್ನು ಅನುಸರಿಸಿ ಕೇಂದ್ರ ಸರಕಾರ ಮುಕ್ತವಾಗಿ ಪೆಟ್ರೋಲ್ ಪಂಪ್ಗಳನ್ನು ನೀಡಲು ಮುಂದಾಗಿದ್ದು ಈಗಾಗಲೇ ಸ್ಥಳಗಳನ್ನು ಗುರುತಿಸಿ ಜನರಿಂದ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಮಾರಾಟ ಅಧಿಕಾರಿ ಆದಿತ್ಯ ಅರವಿಂದ ಅವರು ಹೇಳಿದರು.
ಅವರು ಭಟ್ಕಳದಲ್ಲಿ ಇಂಡಿಯನ್ ಆಯಿಲ್, ಬಿ.ಪಿ.ಸಿ.ಎಲ್. ಹಾಗೂ ಎಚ್.ಪಿ.ಸಿ.ಎಲ್. ವತಿಯಂದ ಪತ್ರಿಕಾ ಗೋಷ್ಟಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಯಾವುದೇ ಅಭ್ಯರ್ಥಿಯು ಪೆಟ್ರೋಲ್ ಬಂಕ್ ತೆರೆಯುವಲ್ಲಿ ಆಸಕ್ತಿ ಇದ್ದರೆ ಅವರು ಅರ್ಜಿ ಹಾಕಬಹುದು. ಈ ಹಿಂದೆ ಜಾಗಾ ಇದ್ದವರು ಮಾತ್ರ ಅರ್ಜಿ ಸಲ್ಲಿಸಬಹುದು, ಆದರೆ ಈ ಬಾರಿ ಜಾಗ ಇಲ್ಲದವರು ಕೂಡಾ ಅರ್ಜಿ ಹಾಕಿಕೊಳ್ಳಬಹುದು. ನಂತರ ಮಂಜೂರಿಯಾದ ನಂತರ ಜಾಗಾ ಹುಡುಕಿ ಬಂಕ್ ತೆರೆಯಬಹುದು ಎಂದರು. ಪ್ರತಿಯೊಂದು ಕೂಡಾ ಪಾರದರ್ಶಕವಾಗಿ ನಡೆಯುತ್ತಿದ್ದು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ಎಲ್ಲರಿಗೂ ಅವಕಾಶ ದೊರೆಯುವುದು. ಅರ್ಜಿ ಸಲ್ಲಿಸಲು ಡಿಸೆಂಬರ್ 24 ಕೊನೆಯ ದಿನಾಂಕವಾಗಿದ್ದು ಯಾರು ಬೇಕಾದರೂ ಕೂಡಾ ಅರ್ಜಿ ಸಲ್ಲಿಸಬಹುದು ಎಂದರು.
ಪೆಟ್ರೋಲ್ ಬಂಕ್ ಮಂಜೂರಿ ಮಾಡಲು ಆಯಾಯ ಕಂಪೆನಿಗಳ ನಿಯಮವಿರುತ್ತದೆ. ಅದಕ್ಕೆ ಅಗತ್ಯವಿರುವ ಸ್ಥಳಾವಕಾಶ, ಇನ್ವೆಸ್ಟ್ಮೆಂಟ್ ಹಾಗೂ ಈಗಾಗಲೇ ಗುರುತಿಸಿದ ಸ್ಥಳದ ಮಾಹಿತಿ ವೆಬ್ಸೈಟ್ನಲ್ಲಿದ್ದು ಯಾರು ಬೇಕಾದರೂ ನೋಡಿಕೊಳ್ಳಬಹುದು. ಭಟ್ಕಳ ತಾಲೂಕಿನಲ್ಲಿ 7 ಪೆಟ್ರೋಲ್ ಬಂಕ್ಗಳನ್ನು ತೆರೆಯುವ ಅವಕಾಶವಿದ್ದು, ಸ್ವಂತ ಇನ್ವೆಸ್ಟ್ಮೆಂಟ್, ಕಂಪೆನಿಯ ಇನ್ವೆಸ್ಟ್ಮೆಂಟ್ ಹಾಗೂ ಡಿಪಾಸಿಟ್ ಎಷ್ಟಾಗುತ್ತದೆ ಎಂದೂ ಕೂಡಾ ಹೇಳಲಾಗಿದೆ ಎಂದರು.
ಈ ಬಾರಿ ಅತೀ ಗ್ರಾಮೀಣ ಪ್ರದೇಶಕ್ಕೆ ಕೂಡಾ ಅವಕಾಶವನ್ನು ನೀಡಲಾಗಿದ್ದು ಮುಖ್ಯವಾಗಿ ಗ್ರಾಮೀಣ ರೈತರ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಅವಕಾಶ ನೀಡಲಾಗಿದೆ. ಈಗಾಗಲೇ ಎಲ್ಲಾ ಪ್ರದೇಶಗಳನ್ನು ಪಟ್ಟಿ ಮಾಡಲಾಗಿದ್ದು ಅವಶ್ಯಕತೆ ಇರುವವರು ಅರ್ಜಿ ಸಲ್ಲಿಸಿ ಸಾರ್ವಜನಿಕ ಸೇವೆ ಸಲ್ಲಿಸಲು ಹಾಗೂ ಉದ್ಯೋಗ ನೀಡಲು ಅವಕಾಶವಿದೆ. ಪೆಟ್ರೋಲ್ ಬಂಕ್ಗಳಿಗೆ ಅರ್ಜಿ ಹಾಕುವ ಹಾಗೂ ಮಂಜೂರಿ ಮಾಡುವ ಎಲ್ಲಾ ನಿಯಮಗಳನ್ನು ಕೇಂದ್ರ ಸರಕಾರ ಸಡಿಲಿಸಿದ್ದು ಎಲ್ಲ ವರ್ಗದವರಿಗೂ ಅರ್ಜಿ ಸಲ್ಲಿಸಲು ಅಕವಾಶ ಮಾಡಿ ಕೊಡುವ ಉದ್ದೇಶ ಹೊಂದಲಾಗಿದೆ. ಎಲ್ಲಾ ಪೆಟ್ರೋಲ್ ಬಂಕ್ಗಳನ್ನು ಕೂಡಾ ಕಂಪೆನಿ ಅತ್ಯಂತ ಆಧುನಿಕ ರೀತಿಯಲ್ಲಿ ಎಲ್ಲಾ ಸ್ವಯಂ ಚಾಲಿತ ಯಂತ್ರಗಳೊಂದಿಗೆ ಆರಂಭಿಸುವುದಾಗಿಯೂ ಅವರು ಹೇಳಿದರು.
ಇಲ್ಲಿನ ಇಂಡಿಯನ್ ಆಯಿಲ್ ಕಂಪೆನಿಯ ಡೀಲರ್ ಹಾಗೂ ಕಾಮಾಕ್ಷಿ ಪೆಟ್ರೋಲ್ ಪಂಪ್ನ ಪಾಲುದಾರರಾದ ನಾಗೇಶ ಎಂ. ಭಟ್ಟ ಮಾತನಾಡಿ ದೇಶದಲ್ಲಿ ಒಟ್ಟೂ 55 ಸಾವಿರ ಪೆಟ್ರೋಲ್ ಪಂಪ್ಗಳನ್ನು ಪ್ರಾರಂಭಿಸಲು ಈಗಾಗಲೇ ಜಾಹೀರಾತು ನೀಡಲಾಗಿದೆ. ಅದರಂತೆ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕೂಡಾ ಪೆಟ್ರೋಲ್ ಪಂಪ್ ತೆರೆಯಲು ಅವಕಾಶವಿದ್ದು ಜಿಲ್ಲೆಯ ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದರು. ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಮಾಲಿಕ ರಾಮಕೃಷ್ಣ ನಾಯ್ಕ ಉಪಸ್ಥಿತರಿದ್ದರು.