ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ "ನಾನು ಓದಿದ ಕನ್ನಡ ಪುಸ್ತಕ" ಪುಸ್ತಕ ಪರಿಚಯ ಸ್ಪರ್ದೆಯು ಶನಿವಾರ ನಡೆಯಿತು.
ಸ್ಪರ್ಧೆಯಲ್ಲಿ ಪೂಜಿತಾ ಮೊಗೇರ ಪ್ರಥಮ, ವರ್ಷಿಣಿ ಕಾಲ್ತೋಡ್ಕರ್ ದ್ವಿತೀಯ ಹಾಗೂ ಸಂದೇಶ ಆಚಾರ್ಯ ತೃತೀಯ ಬಹುಮಾನವನ್ನು ಪಡೆದುಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗಾಧರ ನಾಯ್ಕ ಮಾತನಾಡಿ ವಿಧ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ಶಾಲೆಯ ವಾಚನಾಲಯದಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳು ಮನುಷ್ಯನ ಜ್ಞಾನಾರ್ಜನೆಗೆ ಕಾರಣವಾಗುವ, ಎಲ್ಲ ಸಂದರ್ಭಕ್ಕೂ ಒದಗುವ ನಿಜಮಿತ್ರ ಮಾತ್ರವಲ್ಲ ನಮ್ಮ ವ್ಯಕ್ತಿತ್ವವನ್ನು ಬೆಳಗಲು ಸಹಕಾರಿ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಕಸಾಪ ಬಳಗದ ತಿಲೋತ್ತಮೆ ಗೊಂಡ ಉಪಸ್ಥಿತರಿದ್ದು ಶಾಲಾ ವಾಚನಾಲಯಕ್ಕೆ ತಮ್ಮ ಕೃತಿಯಾದ ನಾನು ಅಬಲೆಯಲ್ಲ ಎಂಬ ಕವನ ಸಂಕಲನವನ್ನು ನೀಡಿದರು.
ಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಸಾವಿತ್ರಿ ಮಿಂಚಿ ಸ್ವಾಗತಿಸಿದರು.ಪೂಜಿತಾ ಸಂಗಡಿಗರು ಪ್ರಾರ್ಥಿಸಿದರೆ ಶಿಕ್ಷಕಿ ಶ್ರೀಮತಿ ಮಾಲತಿ ಕೆ. ವಂದಿಸಿದರು. ವಿಧ್ಯಾರ್ಥಿನಿ ಪೂಜಿತಾ ಮೊಗೇರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಮತಿ ಮಾಲತಿ ಕೆ., ಶ್ರೀಮತಿ ಜಯಶ್ರೀ ಆಚಾರಿ, ಶ್ರೀಮತಿ ಹೇಮಲತಾ, ಕು. ಅನುಷಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.