ಬೆಂಗಳೂರು: ಬಿ,ಎಸ್.ಯಡಿಯೂರಪ್ಪ ಹಾಗು ಅನಂತ್ ಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿದೆ. ಜಗದೀಶ್ ಶೆಟ್ಟರ್, ಆರ್.ಅಶೋಕ್ ಮತ್ತು ಈಶ್ವರಪ್ಪರ ಬಳಿ ಹೋಗಿ “ನೀವೇ ಮುಂದಿನ ಸಿಎಂ” ಎನ್ನುವ ಅನಂತ್ ಕುಮಾರ್ ಯಡಿಯೂರಪ್ಪರ ಕಾಲೆಳೆಯುತ್ತಿದ್ದಾರೆ ಎಂದು ರಹಸ್ಯ ಕಾರ್ಯಾಚರಣೆಯೊಂದರಲ್ಲಿ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿರುವುದಾಗಿ ಖಾಸಗಿ ಸುದ್ದಿ ವಾಹಿನಿ ಬಿಟಿವಿ ವರದಿ ಮಾಡಿದೆ.
ರಹಸ್ಯ ಕಾರ್ಯಾಚರಣೆಯಲ್ಲಿ ಸುರೇಶ್ ಗೌಡ ಬಿಜೆಪಿಯ ಆಂತರಿಕ ಕಲಹದ ಬಗ್ಗೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. “ಈಶ್ವರಪ್ಪ, ಜಗದೀಶ್ ಶೆಟ್ಟರ್ ಹಾಗು ಅಶೋಕ್ ಬಳಿ ಹೋಗುವ ಅನಂತ್ ಕುಮಾರ್ ನೀವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಾರೆ, ಈ ಮೂಲಕ ಬಿಎಸ್ ವೈಯವರ ಕಾಲೆಳೆಯುತ್ತಾರೆ. ಜನರು ಈ ಬಾರಿ ಬಿಜೆಪಿಗೆ ಓಟ್ ಹಾಕಲ್ಲ ಎನ್ನುವುದು, ನೂರಲ್ಲ 500 ಕೋಟಿ ಖರ್ಚು ಮಾಡಿದರೂ ಬಿಜೆಪಿ ಅಧಿಕಾರಕ್ಕೇರಲ್ಲ ಎನ್ನುವುದು ಬಿಎಸ್ ವೈಗೆ ಗೊತ್ತು” ಎಂದು ಸುರೇಶ್ ಗೌಡ ಹೇಳಿದ್ದಾರೆ ಎನ್ನಲಾಗಿದೆ.
“ಸಿಟಿ ರವಿ ಯಡಿಯೂರಪ್ಪರ ………ಗೆ ಸಮಾನ, ಯಡಿಯೂರಪ್ಪ ಜೈಲಿಗೆ ಹೋದಾಗ ನಾನು ಕಣ್ಣೀರು ಹಾಕಿದ್ದೆ. ಸಿಟಿ ರವಿಗೆ ಚೋಕ್ ಕೊಡಲು ಜೀವರಾಜ್ ಇದ್ದಾರೆ. ಇದು ಯಡಿಯೂರಪ್ಪರ ಸ್ಟ್ರಾಟಜಿ” ಎಂದವರು ಹೇಳಿದ್ದಾರೆ.
ಇನ್ನು ಆರೆಸ್ಸೆಸ್ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಗೌಡ, “ಆರೆಸ್ಸೆಸ್ ನವರು ಅಡ್ವಾಣಿಯನ್ನೇ ಹೊಡೆದುಬಿಟ್ಟಿದ್ದಾರೆ. ಆರೆಸ್ಸೆಸ್ ನವರಷ್ಟು ಭ್ರಷ್ಟಾಚಾರಿಗಳು ಯಾರೂ ಇಲ್ಲ. ಸುಮ್ಮನೇ ದೇಶಪ್ರೇಮಿಗಳು ಎಂದು ಹೇಳುತ್ತಾರಷ್ಟೇ” ಎಂದು ಸುರೇಶ್ ಗೌಡ ಹೇಳುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೃಪೆ:ವಾರ್ತಾಭಾರತಿ