ಬೆಂಗಳೂರು, ಜೂನ್ ೨೬: ಅಂತರ್ಜಾತಿ ವಿವಾಹವಾದ ದಂಪತಿಯನ್ನು ಉದ್ಯೋಗದಿಂದಲೇ ವಜಾಗೊಳಿಸಿದ್ದನ್ನು ವಿರೋಧಿಸಿ ನಗರದ ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕ್ ಎದುರು ಪ್ರಗತಿಪರರು ಧರಣಿ ನಡೆಸಿದ್ದಾರೆ.
ನವದಂಪತಿ ರಾಕೇಶ್-ಉನ್ನತಿಯವರ ಜೊತೆ ಪತ್ರಕರ್ತ ಅಗ್ನಿಶ್ರೀಧರ್, ಪ್ರಗತಿಪರರಾದ ಅನಂತ ನಾಯಕ್, ಇಂಧೂಧರ ಹೊನ್ನಾಪುರ, ಡಾ.ವೆಂಕಟಸ್ವಾಮಿ, ಬಾನಂದೂರು ಕೆಂಪಯ್ಯ, ಕೃಷ್ಣ ಮಾಸಡಿ, ಮಂಜುನಾಥ್ ಅದ್ದೆ, ಶ್ರೀನಿವಾಸ ಕರಿಯಪ್ಪ, ವಿ. ನಾಗರಾಜ್ ಮೊದಲಾದವರು ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯನ್ನು ಭೇಟಿಯಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧ್ಯಕ್ಷ ಶ್ರೀಪತಿ ರಾವ್ ಸೋಮವಾರದಿಂದ ಉದ್ಯೋಗಕ್ಕೆ ಹಾಜರಾಗುವಂತೆ ದಂಪತಿಗಳಿಗೆ ಸೂಚಿಸಿದ್ದಾರೆ.
ಚಾಮರಾಜಪೇಟೆಯ ಹೊಟೇಲ್ ಉದ್ಯಮದಾರರ ಸಹಕಾರ ಬ್ಯಾಂಕಿನ ದ್ವಿತೀಯ ದರ್ಜೆ ಸಹಾಯಕಿ ಬ್ರಾಹ್ಮಣ ಸಮುದಾಯದ ಉನ್ನತಿ ಹಾಗೂ ಅದೇ ಬ್ಯಾಂಕ್ ಉದ್ಯೋಗಿ ಮೊಗವೀರರಾದ ರಾಕೇಶ್ ಪ್ರೀತಿಸಿ ಏಳು ತಿಂಗಳ ಹಿಂದೆ ಕಾನೂನುಬದ್ಧ ವಿವಾಹವಾಗಿದ್ದರು. ಇದಕ್ಕೆ ಅವರ ಮನೆಗಳಲ್ಲೂ ವಿರೋಧವಾಗಿತ್ತು. ಮನೆಯವರನ್ನು ಒಲಿಸುವ ಯತ್ನದಲ್ಲಿದ್ದಾಗಲೇ ಬ್ಯಾಂಕ್ ಏಕಾಏಕಿ ಇಬ್ಬರನ್ನೂ ಕಾರಣ ಕೇಳದೇ ನೌಕರಿಯಿಂದ ವಜಾಗೊಳಿಸಿತ್ತು. ಈ ಅನಿರೀಕ್ಷಿತ ಘಟನೆಯಿಂದ ವಿಚಲಿತರಾದ ನವದಂಪತಿ ಹನುಮಂತನಗರ ಪೊಲೀಸರಲ್ಲಿ ರಕ್ಷಣೆಗೆ ಮನವಿ ಮಾಡಿದ್ದು, ಆರಂಭದಲ್ಲಿ ಕೋರಿಕೆಗೆ ಸ್ಪಂದಿಸದ ಪೊಲೀಸರು ಬಳಿಕ ಬೇಡಿಕೆಗೆ ಸ್ಪಂದಿಸಿದ್ದರು.
ರಾಕೇಶ್ ಪತ್ನಿ ಕಸಾಪ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿಯವರ ಸಹೋದರನ ಪುತ್ರಿಯಾಗಿದ್ದರಿಂದ ಬ್ಯಾಂಕ್ ಆಡಳಿತಕ್ಕೆ ಒತ್ತಡ ಹಾಕಿ ಏಕಾಏಕಿ ಉದ್ಯೋಗದಿಂದ ವಜಾಗೊಳಿಸಲಾಗಿತ್ತೆನ್ನಲಾಗಿದೆ.