ಆತ್ಮೀಯರೇ ,
ಗೌರಿ ಲಂಕೇಶ್ ಅವರು ಪ್ರಜಾತಂತ್ರ ಮತ್ತು ಸೌಹಾರ್ದತೆಯ ನಿರ್ಭೀತ ಪ್ರತಿಧ್ವನಿಯಾಗಿದ್ದರು. ಅವರು ಗೌರಿ ಲಂಕೇಶ್ ಪತ್ರಿಕೆ ಯ ಸಂಪಾದಕಿಯಾಗಿ ಹೊರತಂದ ಪ್ರತಿಯೊಂದು ಸಂಚಿಕೆಯೂ ಮತ್ತು ಪಾಲ್ಗೊಂಡ ಪ್ರತಿಯೊಂದು ಚಳವಳಿಯು ದ್ವೇಷದ ವಿರುದ್ಧ ಪ್ರೀತಿಗಾಗಿ, ಸುಳ್ಳಿನ ವಿರುದ್ಧ ಸತ್ಯಕ್ಕಾಗಿ, ಅಸಮಾನತೆಗಳ ವಿರುದ್ಧ ಸಮಾನತೆಗಾಗಿ ನಡೆಸಿದ ಹೋರಾಟವೇ ಆಗಿತ್ತು. ಹೀಗಾಗಿಯೇ ಈ ದೇಶದಲ್ಲಿ ದ್ವೇಷದ ರಾಜಕಾರಣವನ್ನು ಬಿತ್ತುವ ಮೂಲಕ ಪ್ರಜಾತಂತ್ರವನ್ನು ನಾಶಮಾಡಬೇಕೆಂದಿರುವ ಶಕ್ತಿಗಳು ೨೦೧೭ರ ಸೆಪ್ಟೆಂಬರ್ ೫ರಂದು ಗೌರಿ ಲಂಕೇಶರನ್ನು ಭೀಕರವಾಗಿ ಹತ್ಯೆ ಮಾಡಿದವು. ಮತ್ತು ಗೌರಿಯವರ ಹತ್ಯೆಯನ್ನು ಸಂಭ್ರಮಿಸಿದವು.
ಆದರೆ ಅವರ ಸಂಭ್ರಮ ಕ್ಷಣಿಕವಾಗಿತ್ತು. ಏಕೆಂದರೆ ದ್ವೇಷಕಾರಣದ ಶಕ್ತಿಗಳಿಗೆ ಭ್ರಮನಿರಸನ ಉಂಟುಮಾಡುವಂತೆ ಗೌರಿ ಲಂಕೇಶರ ಹತ್ಯೆ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಸಾತ್ವಿಕ ಆಕ್ರೋಶವನ್ನು ಕೆರಳಿಸಿ, ನ್ಯಾಯಕ್ಕಾಗಿ ಹೋರಾಡುವವರ ಬದ್ಧತೆಯನ್ನು ನೂರ್ಮಡಿ ಹೆಚ್ಚಿಸಿದ್ದು ಈಗ ಇತಿಹಾಸ. ವಾಸ್ತವವಾಗಿ ಕರ್ನಾಟಕ ಮತ್ತು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಮೂಲೆಮೂಲೆಂiಲ್ಲಿ ಜನರು ಗೌರಿಯ ಸಾವಿಗೆ ಕಣ್ಣೀರು ಮಿಡಿದಿದ್ದಾರೆ. ತಮಗೆ ತೋಚಿದ ರೀತಿಯಲ್ಲಿ ಹತ್ಯೆಯ ವಿರುದ್ಧ ಹಲವು ಬಗೆಯ ಹೋರಾಟಗಳನ್ನು ಹಮ್ಮಿಕೊಂಡಿದ್ದಾರೆ. ಗೌರಿ ನಂಬಿದ ಮೌಲ್ಯಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಾಗಿ ಧೃಢ ನಿಶ್ಚಯ ಘೋಷಿಸಿದ್ದಾರೆ.
ಹೀಗಾಗಿ ಇಂದು ನಮ್ಮ ಗೌರಿ ನಿರ್ಭೀತ ಭಿನ್ನಮತದ ಮತ್ತು ಜಾತ್ಯತೀತ ಪ್ರಜಾತಂತ್ರದ ಅದಮ್ಯ ಧ್ವನಿಗೆ ಸಂಕೇತವಾಗಿಬಿಟ್ಟಿದ್ದಾರೆ. ಸಾಂವಿಧಾನಿಕ ಮೌಲ್ಯಗಳನ್ನು, ಸಾಂಸ್ಕೃತಿಕ ಬಹುತ್ವವನ್ನೂ ಮತ್ತು ಜಾತಿರಹಿತ, ಲಿಂಗ ಹಾಗೂ ಧಾರ್ಮಿಕ ತಾರತಮ್ಯ ರಹಿತ, ಮುಕ್ತ ಮತ್ತು ನಿರ್ಭೀತ ಸಮಾಜದ ಆಶಯವನ್ನು ಹೊಂದಿರುವ ಪ್ರತಿಯೊಂದು ವ್ಯಕ್ತಿಯಲ್ಲೂ ಗೌರಿಯವರ ಸಾವು ಸಕಾರಾತ್ಮಕವಾದ ಶಕ್ತಿಯನ್ನೂ ಹುಟ್ಟಿಹಾಕಿದಂತಿದೆ. ಇದೀಗ ಗೌರಿ ಸಾವಿರ ಸಾವಿರ ಧ್ವನಿಗಳಲ್ಲಿ ಅಧಿಕಾರಕ್ಕೆದುರಾಗಿ ಸತ್ಯವನ್ನು ಪ್ರತಿಪಾದಿಸುತ್ತಿರುವಂತೆ ಕಾಣುತ್ತಿದೆ.
ಗೌರಿ ಮೆಮೊರಿಯಲ್ ಟ್ರಸ್ಟ್ ಆ ಧ್ವನಿಯ ಮುಂದುವರೆಕೆಯಾಗಿದೆ. ಹಿರಿಯ ಸ್ವಾತಂತ್ರ್ಯ ಹೊರಾಟಗಾರ ಮತ್ತು ಸಾಮಾಜಿಕ ಚಳವಳಿಗಳ ರಾಕ್ ಸ್ಟಾರ್ ಎಂದು ಗೌರಿ ಲಂಕೇಶರು ಮೆಚ್ಚಿಕೊಳ್ಳುತ್ತಿದ್ದ ನಾಡಿನ ಸಾಕ್ಷಿಪ್ರಜ್ನೆಯಾದ ಶ್ರೀ.ಎಚ್.ಎಸ್. ದೊರೆಸ್ವಾಮಿಯವರು ಈ ಟ್ರಸ್ಟಿನ ಅಧ್ಯಕ್ಷರಾಗಿದ್ದಾರೆ. ತೀಸ್ತಾ ಸೆಟೆಲ್ವಾದ್, ಗಣೇಶ್ ದೇವಿ, ರಾಜ್ದೀಪ್ ಸರ್ದೇಸಾಯಿ, ಸಿದ್ಧಾರ್ಥ್ ವರದರಾಜನ್, ಪ್ರಕಾಶ್ ರೈ ನಂಥ ಭಾರತದ ಪ್ರಖ್ಯಾತ ವಿದ್ವಾಂಸರು, ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು ಹಾಗೂ ಕಲಾವಿದರು ಮತ್ತು ಕರ್ನಾಟಕದ ಎಲ್ಲಾ ಜನಪರ ಹೋರಾಟ ಧಾರೆಗಳು ಈ ಟ್ರಸ್ಟಿನ ಸದಸ್ಯರು ಮತ್ತು ಪೋಷಕರಾಗಿದ್ದಾರೆ.
ಈ ಟ್ರಸ್ಟಿನ ವತಿಯಿಂದ ಗೌರಿಯ ಹುಟ್ಟುದಿನವಾದ ಜನವರಿ ೨೯ ಅನ್ನು ಗೌರಿ ದಿನವೆಂದು ಆಚರಿಸಲು ಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಗೌರಿಯವರು ತನ್ನ ಹೆಮ್ಮೆಯ ಮಕ್ಕಳೆಂದು ಭಾವಿಸುತ್ತಿದ್ದ ಮತ್ತು ಭಾರತವನ್ನು ದ್ವೇಷ ರಾಜಕಾರಣದಿಂದ ರಕ್ಷಿಸಿ ಭವಿಷ್ಯದ ಭಾರತವನ್ನು ಪರಸ್ಪರ ಗೌರವ ಮತ್ತು ಸಮಾನತೆ ಇರುವ ನೈಜ ಪ್ರಜಾಸತ್ತಾತ್ಮಕ ಭಾರತವನ್ನಾಗಿಸಲು ಹೋರಾಡುತ್ತಿರುವ ಜಿಗ್ನೇಶ್, ಕನ್ಹಯ್ಯ ಕುಮಾರ್, ಶೆಹ್ಲಾ ರಷೀದ್, ಉಮರ್ ಖಲೀದ್, ರೀಚಾ ಸಿಂಗ್ ಹಾಗೂ ದೇಶದ ಮತ್ತು ಕರ್ನಾಟಕದ ಇನ್ನಿತರ ಯುವ ನಾಯಕರು ಭಾಗವಹಿಸಲಿದ್ದಾರೆ. ಒಟ್ಟುಸೇರಿ ಗೌರಿಗೆ, ಅವರ ಆಶಯಗಳನ್ನು ಸಾಕಾರಗೊಳಿಸುವುದಕ್ಕೆ ತಮ್ಮ ಬದ್ಧತೆಯನ್ನು ಮರುಘೋಷಿಸಲಿದ್ದಾರೆ. ಅವರ ಜೊತೆ ಹುತಾತ್ಮ ರೋಹಿತ್ ವೇಮುಲ ಅವರ ತಾಯಿ ರಾಧಿಕಾ ವೇಮುಲ, ಕವಿತಾ ಲಂಕೇಶ್, ಪ್ರಖ್ಯಾತ ನಟ ಪ್ರಕಾಶ್ ರೈ ಹಾಗೂ ಇನ್ನಿತರರು ಕೂಡಾ ಸೇರಿಕೊಳ್ಳಲಿದ್ದಾರೆ. ಕಬೀರ್ ಕಲಾ ಮಂಚ್ನ ಶೀಥಲ್ ಸಾಟೆ ಮತ್ತವರ ತಂಡ, ಆರತಿ ಹಾಗು ಅವರ ತಂಡ ಮತ್ತು ಖ್ಯಾತ ಶಾಸ್ತ್ರೀಯ ಗಾಯಕ ಟಿಎಂ ಕೃಷ್ಣ ಅವರುಗಳು ಗೌರಿಯ ನೆನಪಲ್ಲಿ ಹಾಡಲಿದ್ದಾರೆ.
ಗೌರಿಯ ಆಶಯಗಳಿಗೆ ಬದ್ಧತೆಯನ್ನು ಘೋಷಿಸುತ್ತಾ ಗೌರಿಯನ್ನು ನೆನಸಿಕೊಳ್ಳುವ ಈ ಕಾರ್ಯಕ್ರಮಕ್ಕೆ ತಾವು ತಪ್ಪದೇ ಹಾಜರಿರಬೇಕೆಂದು ನಮ್ಮ ಪ್ರೀತಿಪೂರ್ವಕ ಆಗ್ರಹ.