ಬೆಂಗಳೂರು, ಆ ೧೯: ಇತ್ತೀಚಿನ ಅಮ್ನೆಸ್ಟಿ ಇಂಟರ್ನ್ಯಾಶನಲ್ ಸಂಘಟನೆ ಕರೆ ನೀಡಿದ ಪ್ರತಿಭಟನಾ ಮೆರವಣಿಗೆಗಳಿಂದ ರೋಸಿ ಹೋದ ಉನ್ನತ ಶಿಕ್ಷಣ ಮಂಡಳಿ ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಆ ಪ್ರಕಾರ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ಅಧಿಕೃತ ನೋಟೀಸು ರವಾನಿಸಿ ವಿದ್ಯಾರ್ಥಿಗಳು ಯಾವುದೇ ರೀತಿಯ ರ್ಯಾಲಿ ಮತ್ತು ಪ್ರತಿಭಟನಾ ಮೆರವಣಿಗೆಗಳಲ್ಲಿ ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಅಧಿಕೃತ ನೋಟೀಸ್ ಮೂಲಕ ಎಲ್ಲಾ ಶಾಲೆಗಳ ಪ್ರಾಂಶುಪಾಲರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು ಯಾವುದೇ ರೀತಿಯ ಪ್ರತಿಭಟನಾ ಮೆರವಣಿಗೆ, ರ್ಯಾಲಿ ಮತ್ತು ಕಾಲೇಜು ಆವರಣದಲ್ಲಿ ಕಾನೂನಿಗೆ ವಿರುದ್ದವಾದ ಯಾವುದೇ ಚಟುವಟಿಕೆಗಳಲ್ಲಿ ವಿದ್ಯಾರ್ಧಿಗಳು ಭಾಗವಹಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ತಿಳಿಸಲಾಗಿದೆ. ಈ ನಿರ್ದೇಶನ ರಾಜ್ಯದ ಎಲ್ಲಾ ಡಿಗ್ರಿ, ಅನುದಾನಿತ, ಅನುದಾನ ರಹಿತ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಗೂ ಅನ್ವಯಿಸುತ್ತದೆ.
ಈ ವಿಷಯವನ್ನು ಪ್ರತಿ ತರಗತಿಯಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವುದನ್ನೂ ತಿಳಿಸಲಾಗಿದ್ದು ವಿದ್ಯಾರ್ಥಿಗಳು ತಮ್ಮ ವ್ಯಾಸಾಂಗದತ್ತ ಹೆಚ್ಚು ಗಮನ ನೀಡಿ ಕಾಲೇಜಿಗೆ ಮತ್ತು ನಾಡಿಗೆ ಹೆಸರು ತರುವಂತಹ ಕೆಲಸವನ್ನು ಮಾಡಬೇಕು ಎಂದು ತಿಳಿಸಲಾಗಿದೆ.