ವೇತನ ಆಯೋಗದ ವರದಿ ಬಳಿಕ ಸರಕಾರಿ ನೌಕರರ ವೇತನ ಪರಿಷ್ಕರಣೆ: ಸಿಎಂ ಸಿದ್ದರಾಮಯ್ಯ

Source: sonews | By Staff Correspondent | Published on 15th November 2017, 12:09 AM | State News | Don't Miss |

ಬೆಳಗಾವಿ: ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಆರನೆ ವೇತನ ಆಯೋಗದ ವರದಿ 2018ರ ಜನವರಿ ತಿಂಗಳ ಒಳಗಾಗಿ ಸಲ್ಲಿಕೆಯಾಗುವ ನಿರೀಕ್ಷೆ ಇದ್ದು, ಆ ಬಳಿಕ ಕೂಡಲೇ ನೌಕರರ ವೇತನ ಪರಿಷ್ಕರಣೆಗೆ ಕ್ರಮ ಕೈಗೊಳ್ಳುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 

 

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಸದಸ್ಯ ಐಹೊಳೆ ಮಹಲಿಂಗಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ವೇತನದ ನಡುವೆ ತಾರತಮ್ಯ ಇರುವುದು ಸತ್ಯ. ಅದನ್ನು ಸರಿಪಡಿಸಲು ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿದ್ದು, ಆರು ತಿಂಗಳೊಳಗಾಗಿ ಆಯೋಗ ವರದಿ ನೀಡಬೇಕಿತ್ತು. ಆದರೆ ಕಾಲಾವಕಾಶ ಕೇಳಿದ್ದರಿಂದ 2018ರ ಜನವರಿ 31ರವರೆಗೆ  ಕಾಲಾವಧಿ ವಿಸ್ತರಿಸಲಾಗಿದೆ ಎಂದು ವಿವರಿಸಿದರು.

ಆರನೆ ವೇತನ ಆಯೋಗ ವರದಿ ಸಲ್ಲಿಕೆಯಾದ ತಕ್ಷಣ ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ನಡುವೆ ಸರಕಾರಿ ನೌಕರರಿಗೆ ಮಧ್ಯಂತರ ಪರಿಹಾರ ನೀಡುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಅದೇ ರೀತಿ ಪೊಲೀಸರಿಗೆ ಒಂದೇ ವರ್ಷದಲ್ಲಿ 2ಸಾವಿರ ರೂ.ವೇತನ ಹೆಚ್ಚಳ ಮಾಡಿದ್ದು, ಇಪ್ಪತ್ತು ವರ್ಷಗಳಿಂದ ಭಡ್ತಿ ಇಲ್ಲದೆ ಪೊಲೀಸ್ ಸಿಬ್ಬಂದಿಗೆ ಭಡ್ತಿ ನೀಡಲಾಗಿದೆ. ಇನ್ನು ಮುಂದೆ 12 ವರ್ಷಕ್ಕೊಮ್ಮೆ  ಭಡ್ತಿ ನೀಡುವ ನಿಯಮ ರೂಪಿಸಲಾಗಿದೆ. ಇದರಿಂದ ಕಾನ್‍ ಸ್ಟೇಬಲ್‍ನಿಂದ ಎಎಸ್ಪಿ, ಪಿಎಸ್ಸೈ ವರೆಗೂ ಮೇಲ್ದರ್ಜೆಗೇರುವ ಅವಕಾಶವಿದೆ. ರಾಜ್ಯದ ಪೊಲೀಸ್ ಇಲಾಖೆಯಲ್ಲಿದ್ದ ಅಡ್ರರ್ಲಿ ಪದ್ಧತಿಯನ್ನು ರದ್ದುಗೊಳಿಸಿ ಆದೇಶ ನೀಡಲಾಗಿದೆ. ಆದರೆ ಇನ್ನೂ ಜಾರಿಯಾಗಿಲ್ಲ ಎಂದು ಒಪ್ಪಿಕೊಂಡರು.

ತಿದ್ದುಪಡಿ ಇಲ್ಲ: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮಕ ಸಂಬಂಧ ಅಂತಿಮ ಪಟ್ಟಿಯಲ್ಲಿ ಹೆಸರಿರುವವರು ಹಂಚಿಕೆಯಾದ ಇಲಾಖೆಯಲ್ಲಿ ವರದಿ ಮಾಡಿಕೊಳ್ಳದೆ, ಖಾಲಿ ಉಳಿಯುವ ಹುದ್ದೆಗಳನ್ನು ಮುಂದಿನ ವರ್ಷದ ರಿಕ್ತ ಸ್ಥಾನ (ಫ್ರೇಶ್ ವೇಕೆನ್ಸಿ) ಎಂದು ಪರಿಗಣಿಸಿ ಆ ಹುದ್ದೆಗೂ ಹೊಸದಾಗಿ ನೇಮಕಾತಿ ಮಾಡಿಕೊಳ್ಳುವುದು ಎಂದು ಮತ್ತೊಂದು ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದರು.

ಗೆಜೆಟೆಡ್ ಪ್ರೊಬೇಷನರಿ ಹುದ್ದೆಯಲ್ಲಿ ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲು ಆಸ್ಪದ ಇಲ್ಲ. ಆದರೆ ಎ, ಬಿ, ಸಿ, ಡಿ ದರ್ಜೆ ಹುದ್ದೆಗಳ ನೇಮಕಾತಿಯಲ್ಲಿ  ಹೆಚ್ಚುವರಿ ಪಟ್ಟಿ ಪ್ರಕಟಿಸಲು ಅವಕಾಶ ನೀಡಲಾಗಿದೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪರೀಕ್ಷೆ ನಡೆದಾಗ ಕೆಎಎಸ್, ಎಸಿ, ತಹಶೀಲ್ದಾರ್ ಹುದ್ದೆಗಳು ಸೇರಿ 14 ಇಲಾಖೆಗಳಿಗೆ ನೇಮಕಾತಿ ನಡೆಯುತ್ತದೆ. ಕೆಲವರು ಹಂಚಿಕೆಯಾದ ಇತರ ಇಲಾಖೆಗಳಿಗೆ ಸೇರುವುದಿಲ್ಲ. ಅಂತಹ ಹುದ್ದೆಗಳನ್ನು ಬಾಕಿ ಹುದ್ದೆಗಳೆಂದು ನೇಮಕಾತಿ ವೇಳೆ ಪರಿಗಣಿಸಲಾಗುವುದು ಎಂದು ಹೇಳಿದರು.

ಎಸಿಬಿಯಲ್ಲಿ 500 ಪ್ರಕರಣ ದಾಖಲು: ಸಿದ್ದರಾಮಯ್ಯ
ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸುಮಾರು 500 ಮಂದಿ ಸರಕಾರಿ ಅಧಿಕಾರಿ-ನೌಕರರುಗಳ ವಿರುದ್ಧ ಪ್ರಕರಣ ದಾಖಲಿಸಿದೆ ಎಂಬ ಅಂಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗಪಡಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಎಸಿಬಿ ಎಷ್ಟು ಪ್ರಕರಣ ದಾಖಲಿಸಿದೆ, ಯಾವ-ಯಾವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಸ್ಪಷ್ಟಣೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸಿಬಿಯಲ್ಲಿ 500 ಪ್ರಕರಣಗಳಲ್ಲಿ ಕ್ರಮ ಕೈಗೊಂಡಿದೆ. ಅಷ್ಟು ಪ್ರಕರಣಗಳ ಮಾಹಿತಿಯನ್ನು ಪಡೆದು ಈ ಸದನದಲ್ಲೇ ಉತ್ತರ ನೀಡುತ್ತೇನೆ. ಅದಕ್ಕೆ ಕಾಲಾವಕಾಶ ಬೇಕು. ಯಾವ ಪ್ರಕರಣವನ್ನು ಮುಚ್ಚಿಡುವ ಉದ್ದೇಶ ಸರಕಾರಕ್ಕೆ ಇಲ್ಲ. ಮಾಹಿತಿ ಹಕ್ಕು ಕಾಯ್ದೆ (ಆರ್‍ಟಿಐ) ಇರುವುದರಿಂದ ಯಾವುದೇ ವಿಚಾರಗಳನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...