ರಂಭಾಪುರಿ ಪೀಠ (ಬಾಳೆಹೊನ್ನೂರು) ಆಗಸ್ಟ್- 28: ಬೆಳೆದು ಬಂದಿರುವ ಆದರ್ಶ ಸಂಸ್ಕೃತಿ ಉಳಿಸಿ ಬೆಳೆಸಲು ಕೇವಲ ಧರ್ಮ ಪೀಠಗಳು ಹೋರಾಟ ಮಾಡಿದರೆ ಸಾಲದು ಇದಕ್ಕಾಗಿ ಜನರಲ್ಲಿಯೂ ಆಸಕ್ತಿ ಬೆಳೆದು ಬರಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ರವಿವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದ ಶ್ರೀ ಜಗದ್ಗುರು ರುದ್ರಮುನೀಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಎನ್.ಆರ್.ಪುರ ತಾಲೂಕ ಚು.ಸಾ.ಪರಿಷತ್ ಹಾಗೂ ಶ್ರೀ ವಾಣಿ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೆಂದ್ರ ಬಾಳೆಹೊನ್ನೂರು ಇವರ ಆಶ್ರಯದಲ್ಲಿ ಜರುಗಿದ ಕೃಷ್ಣ ವೇಷ ಸ್ಪರ್ಧೆ-ಕೃಷ್ಣನ ಚಿತ್ರ ಬರೆಯುವ ಸ್ಪರ್ಧೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮವು ವಿನಾಶದ ಅಂಚಿಗೆ ತಲುಪಿದಾಗ ಭಗವಂತ ಅವತರಿಸಿ ಬಂದಿದ್ದಾನೆ. ಚು.ಸಾ.ಪ. ಜಿಲ್ಲಾಧ್ಯಕ್ಷ ಯಜ್ಞಪುರುಷ ಭಟ್ಟರು ಕಳೆದ 16 ವರ್ಷಗಳಿಂದ ಈ ಸ್ಪರ್ಧೆಯನ್ನು ಬಾಳೆಹೊನ್ನೂರಿನಲ್ಲಿ ಆಚರಿಸುತ್ತ ಬಂದಿದ್ದು ಈ ಬಾರಿ ಶ್ರೀ ಜಗದ್ಗುರು ರಂಭಾಪುರಿ ಮಹಾಪೀಠದಲ್ಲಿ ಆಚರಿಸುತ್ತಿರುವುದು ತಮಗೆ ಸಂತಸ ಉಂಟು ಮಾಡಿದೆ. ಧರ್ಮ ದೇವರು ಸಂಸ್ಕೃತಿ ಪುನಶ್ಚೇತನಕ್ಕೆ ಮತ್ತು ಮಕ್ಕಳಲ್ಲಿ ಅಡಗಿರುವ ವಿಶೇಷ ವ್ಯಕ್ತಿತ್ವವನ್ನು ಹೊರಹಾಕುವುದರಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಭಾರತೀಯ ಉತ್ಕೃಷ್ಠ ಸಂಸ್ಕೃತಿಯನ್ನು ಬಿಂಬಿಸುವ ಯಾವುದೇ ಕಾರ್ಯಕ್ರಮಕ್ಕೆ ಶ್ರೀ ರಂಭಾಪುರಿ ಪೀಠದ ಬೆಂಬಲ ಸದಾ ಇರುತ್ತದೆ ಎಂದು ಅವರು ನುಡಿದರು.
ಎನ್.ಆರ್.ಪುರ ತಾಲೂಕ ಪಂಚಾಯತಿ ಸದಸ್ಯ ಟಿ.ಎಂ. ನಾಗೇಶ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭ ಉದ್ಘಾಟಸಿದರು. ಚು.ಸಾ.ಪ. ಅಧ್ಯಕ್ಷ ಯಜ್ಞಪುರುಷ ಭಟ್ ಮಾತನಾಡಿ ಪಾರಂಪರಿಕವಾಗಿ ಬೆಳೆದು ಬಂದಿರುವ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸುತ್ತ ಬರಲಾಗಿದೆ ಎಂದರು.
ಕೊರ್ತಿ ಕೊಲ್ಹಾರದ ಗುರುಸಿದ್ಧ ಶಿವಾಚಾರ್ಯರು ಉಪಸ್ಥಿತರಿದ್ದರು. ಸಂಸ್ಕೃತ ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ರಾಜಶೇಖರ ಕುಲಕರ್ಣಿ ಮುಖ್ಯ ಅತಿಥಿಯಾಗಿದ್ದರು.
ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪಾರಿತೋಷಕ ಮತ್ತು ಭಾಗವಹಿಸಿದ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಮತ್ತು ಆಶಿಕಾ ಇವರಿಂದ ಭಕ್ತಿ ಗೀತೆ, ಪ್ರೌಢಶಾಲಾ ಶಿಕ್ಷಕ ವೆಂಕಟೇಶ ಇವರಿಂದ ಸ್ವಾಗತ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.