ಭಟ್ಕಳ: ಕಳೆದ ತಿಂಗಳು ಸೆ.14ರಂದು ಹಾಡುಹಗಲೇ ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೆಬಳೆ ಗ್ರಾ.ಪಂ.ಕಾರ್ಯದರ್ಶಿ ಲಿಂಗಪ್ಪ ನಾಯ್ಕ ಎಂಬುವವರ ಮನೆ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮುಗ್ದುಂ ಕಾಲೋನಿಯ ಸಫಾ ಸ್ಟ್ರೀಟ್ ನಿವಾಸಿ ಸಯ್ಯದ್ ಮೂಸಾ ಅಹ್ಮದ್ ಮತ್ತೂ ಹೆಬಳೆ ಹನೀಪಾಬಾದ ತಲಹಾ ಕಾಲೋನಿ ನಿವಾಸಿ ಜಾಫರ ಸಾಧಿಕ್ ಹಬೀಬುಲ್ಲಾ ಶೇಖ ಎಂದು ತಿಳಿದು ಬಂದಿದೆ.
ಇಲ್ಲಿನ ಹೆಬಳೆ ಪಂಚಾಯತ ಕಾರ್ಯದರ್ಶಿ ಲಿಂಗಪ್ಪ ನಾಯ್ಕ ಅವರ ಮನೆಯ ಹಿಂಬದಿ ಬಾಗಿಲು ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಒಟ್ಟು 78 ಗ್ರಾಂ ತೂಕದ 1,57,000 ರೂಪಾಯಿ ಮೌಲ್ಯದ ಬಂಗಾರದ ಅಭರಣ, ಬೆಳ್ಳಿ ಆಭರಣ ಸೇರಿದಂತೆ 20 ಸಾವಿರ ನಗದನ್ನು ಕಳುವು ಮಾಡಿದ್ದರ ಬಗ್ಗೆ ನಗರ ಠಾಣೆಯಲ್ಲಿ ದೂರುದಾರ ಲಿಂಗಪ್ಪ ನಾಯ್ಕ ್ಲ ದೂರು ಸಲ್ಲಿಸಿದ್ದರು. ಈ ದೂರಿನ್ವಯ ಸಿಪಿಐ ಗಣೇಶ ಕೆ.ಎಲ್. ತನಿಖೆ ಕೈಗೆತ್ತಿಕೊಂಡು ನಗರ ಠಾಣೆ ಸಿಬ್ಬಂದಿಗಳತಂಡ ರಚನೆ ಮಾಡಿ ಕಾರ್ಯಚರಣೆಗಿಳಿದಿದ್ದು, ಶುಕ್ರವಾರದಂದು ಮೊದಲ ಆರೋಪಿ ಸಯ್ಯದ್ ಮೂಸಾ ಅಹ್ಮದ್ ನನ್ನು ಬಂಧಿಸಿದ್ದು ಆತನ ವಿಚಾರಣೆ ನಡೆಸಿದ್ದಾರೆ.
ಭಾನುವಾರದಂದು ಇನ್ನೋರ್ವ ಆರೋಪಿ ಜಾಫರ ಸಾಧಿಕ್ ಹಬೀಬುಲ್ಲಾ ಶೇಖ ನನ್ನು ಬಂಧಿಸಿದ್ದಾರೆ. ಆರೋಪಿತರಿಂದ 69.17 ಗ್ರಾಂ ತೂಕದ 1,32,800 ರೂ. ಬಂಗಾರದ ಆಭರಣಗಳನ್ನು ಹಾಗೂ 148.22 ಗ್ರಾಂ.ತೂಕದ ರೂ.ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿ ಜಾಫರ ಸಾಧಿಕ್ ಹಬೀಬುಲ್ಲಾ ಶೇಖ ವರ್ಷದ ಹಿಂದೆ ಹಲವು ಪ್ರಕರಣ ದಾಖಲಾಗಿರುವುದನ್ನು ಪೊಲೀಸ ಮೂಲದಿಂದ ತಿಳಿದು ಬಂದಿದೆ.
ಬಂಧಿತ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿ ಜಾಫರ ಸಾಧಿಕ್ ಹಬೀಬುಲ್ಲಾ ಶೇಖನನ್ನು ಕುಮಟಾಗೆ ಹಾಗೂ ಇನ್ನೋರ್ವ ಆರೋಪಿ ಸಯ್ಯದ್ ಮೂಸಾ ಅಹ್ಮದ್ನನ್ನು ಕಾರವಾರ ಜೈಲಿಗೆ ರವಾನಿಸಲಾಗಿದೆ.