ನ್ಯಾಯಾಲಯಗಳಲ್ಲಿ ಶೀಘ್ರಲಿಪಿಗಾರರ ನೇಮಕಾತಿಗೆ ಅರ್ಜಿ ಆಹ್ವಾನ
ಕಾರವಾರ: ಉತ್ತರ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ 18 ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ (ಸೀನಿಯರ್ ಗ್ರೇಡ್), ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆ (ಸೀನಿಯರ್ ಗ್ರೇಡ್) ಪರೀಕ್ಷೆ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿರಬೇಕು.
ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳ) (ತಿದ್ದುಪಡಿ) ನೇಮಕಾತಿ ನಿಯಮಗಳು 2007ರ ಪ್ರಕಾರ ನೇಮಕಾತಿ ನಡೆಸಲಾಗುವುದು. ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉಕ್ತಲೇಖನವನ್ನು ಕೊಟ್ಟು ಕಂಪ್ಯೂಟರ್ನಲ್ಲಿ ವೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು.
ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಪಡಿಸುವ ದಿನಾಂಕದಂದು ಕನಿಷ್ಠ 18 ವರ್ಷ ಹೊಂದಿರಬೇಕು ಹಾಗೂ ವಿವಿಧ ವರ್ಗಾವಾರು ನಿಯಮಗಳಂತೆ ಗರಿಷ್ಠ ವಯೋಮಿತಿ ಮೀರಿರಬಾರದು. ಮೀಸಲಾತಿ, ಶುಲ್ಕ ವಿವರ ಹಾಗೂ ಹೆಚ್ಚಿನ ಮಾಹಿತಿಗಳನ್ನು ಜಿಲ್ಲಾ ನ್ಯಾಯಾಲಯದ ವೆಬ್ಸೈಟ್ https:/district.ecourts.gov.in/uttarakannada-onlinerecruitment ರಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾ ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.