ಭಟ್ಕಳ: ಶಿಕ್ಷಕರಾಗುವುದು ಸುಲಭದ ಕೆಲಸವಲ್ಲ, ಶಿಕ್ಷಕರಾದವರು ತಾವು ಕೂಡಾ ಅಧ್ಯಯನವನ್ನು ಮಾಡುತ್ತಿರಬೇಕು ಎಂದು ಕುಮಟಾ ಡಾ. ಎ. ವಿ. ಬಾಳಿಗಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎಲ್. ಹೆಗಡೆ ಹೇಳಿದರು.
ಅವರು ಇಲ್ಲಿನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ನಮಗೆ ತಾಯಿಯೇ ಮೊದಲ ಗುರುವಾಗಿದ್ದರೂ ಸಹ ನಾವೆಂದೂ ತಾಯಿಯನ್ನು ಗುರುವಿನ ಸ್ಥಾನದಲ್ಲಿ ನೋಡಿಲ್ಲ, ಆದರೆ ಶಿಕ್ಷಕರಲ್ಲಿ ತಾಯಿಯ ಪ್ರೀತಿಯನ್ನು ಕಾಣುವಂತಾಗಬೇಕು. ಶಿಕ್ಷಕ ವೃತ್ತಿಯನ್ನು ಅರಿತು ಮಾಡಿದರೆ ಮಾತ್ರ ಅದು ಸಫಲತೆಯನ್ನು ಕೊಡುತ್ತದೆ ಎಂದರು.
ಧರ್ಮ, ಅರ್ಥ, ಕಾಮ, ಮೋಕ್ಷ ಇದು ಚತುರ್ವಿದ ಜೀವನ ಕ್ರಮವಾಗಿದೆ. ಆದರೆ ಇಂದು ಮೊದಲ ಹಾಗೂ ಕೊನೆಯನ್ನು ಬಿಟ್ಟು ನಾವು ಅರ್ಥ, ಕಾಮದೆಡೆಗೆ ಮಾತ್ರ ಗಮನ ನೀಡುತ್ತಿದ್ದೇವೆ. ಅದು ಜೀವನವಲ್ಲ ಎನ್ನುವುದು ತಿಳಿಯುವಾಗ ತುಂಬಾ ತಡವಾಗಿತ್ತದೆ. ನಮ್ಮದು ಅತ್ಯಂತ ಶ್ರೀಮಂತ ಪರಂಪರೆ ಇರುವ ದೇಶವಾಗಿದೆ. ನಮ್ಮದು ಭೋಗದ ಜೀವನವಲ್ಲ, ನಮಗೆ ಈ ದೇಶದ ಮಹಾಪುರಷರೇ ಆದರ್ಶ ಪ್ರಾಯರು. ಅವರ ಕುರಿತು ಅಧ್ಯಯನ ಮಾಡಿದಾಗ ಜೀವನವೇನೆಂಬುದು ನಮಗೆ ತಿಳಿಯುವುದು. ಮುಂದೆ ಶಿಕ್ಷಕರಾಗುವ ನೀವು ವಿದ್ಯಾರ್ಥಿಗಳಿಗೂ ಕೂಡಾ ಮಹಾಪುರಷರ ಆದರ್ಶಗಳನ್ನು ಬೋಧಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುರೇಶ ನಾಯಕ ಅವರು ಮಾತನಾಡಿ ಎರಡು ವರ್ಷಗಳ ಬಿ.ಇಡಿ. ಕೋರ್ಸ ಮುಗಿಸಿರುವುದು ಕೇವಲ ಶಿಕ್ಷಕರಾಗುವುದಕ್ಕೆ ಅರ್ಹತೆ ಮಾತ್ರ. ನೀವೋರ್ವ ಉತ್ತಮ ಶಿಕ್ಷಕರಾಗಬೇಕಾದರೆ ಅಧ್ಯಾಪನದಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಅಲ್ಲದೇ ನೀವು ಕಲಿಸುವ ವಿದ್ಯಾರ್ಥಿಗಳ ಕುರಿತು ನೀವು ಕೆಲಸ ಮಾಡುವ ಸಂಸ್ಥೆಯ ಕುರಿತು ನಿಮಗೆ ಕಾಳಜಿಯಿರಬೇಕು ಎಂದೂ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಮಿತಿಗೆ ನೇಮಕಗೊಂಡಿರುವ ಭಟ್ಕಳ ಎಜ್ಯಕೇಶನ್ ಟ್ರಸ್ಟ್ನ ಆಡಳಿತಾಧಿಕಾರಿ ಹಾಗೂ ಶ್ರೀ ಗುರುಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ನಾಗೇಶ ಭಟ್ಟ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕ ಸುಬ್ರಹ್ಮಣ್ಯ ಶೆಟ್ಟಿ, ತಬಸ್ಸಮ್ ಉಪಸ್ಥಿತರಿದ್ದರು.
ಪ್ರೊ. ಗಜಾನನ ಶಾಸ್ತ್ರಿ ಹಾಗೂ ಪ್ರೊ. ಗಂಗಾಧರ ನಾಯ್ಕ ಅತಿಥಿಗಳ ಪರಿಚಯ ಮಾಡಿದರು. ಪ್ರಶಿಕ್ಷಣಾರ್ಥಿಗಳಾದ ತಬಿತಾ ಮತ್ತು ಸಂಗೀತಾ ನಿರೂಪಿಸಿದರು.