ಅಂಕೋಲಾ: ದೇವಸ್ಥಾನದ ಹುಂಡಿಯನ್ನು ಕಳುವು ಮಾಡುತ್ತಿದ್ದ ಕಳ್ಳರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉ.ಕ.ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಗ್ರಾಮದ ನಾಗದೇವತಾ ದೇವಸ್ಥಾನದಲ್ಲಿ ಜರಗಿದೆ.
ಕಳುವು ಮಾಡಲು ಪ್ರಯತ್ನಿಸಿದ ಆರೋಪಿಗಳನ್ನು ಹುಬ್ಬಳ್ಳಿ ಮೂಲದ ಸಂತೋಷ್ ಮಂಜುನಾಥ್ ಬಸ್ತಿ(೩೦) ಹಾಗೂ ಬಾಹುಬಲಿ ಬಸ್ತಿ ಎಂದು ಗುರುತಿಸಲಾಗಿದೆ.
ಇವರು ನಂದಿನ ಹಾಲು ಸರಬರಾಜು ಮಾಡುವ ವಾಹನದ ಚಾಲಕ ಹಾಗೂ ಕ್ಲಿನರ್ ಕೆಲಸ ನಿರ್ವಹಿಸುತ್ತಿದ್ದು ಕಳೆದ ಹಲವು ದಿನಗಳಿಂದ ದೇವಸ್ಥಾನಗಳ ಕಳುವು ಕಾರ್ಯಕ್ಕೆ ಕೈಹಾಕಿದ್ದರು ಎನ್ನಲಾಗಿದ್ದು ಹೆದ್ದಾರಿ ಪಕ್ಕದಲ್ಲಿರುವ ದೇವಸ್ಥಾನಗಳನ್ನು ಟಾರ್ಗೇಟ್ ಮಾಡಿಕೊಂಡು ಕಳುವುಗೈದು ಪರಾರಿಯಾಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಿಂದ ನಂದಿನ ಹಾಲು ವಾಹನ ಚಾಲಕ ಮತ್ತು ಕ್ಲಿನರ್ ಮಾಡುತ್ತಿದ್ದ ಕಳುವು ಧಂದೆ ಬಯಲಿಗೆ ಬಂದಿದೆ ಎನ್ನಲಾಗಿದೆ. ಹಾಲಿನ ವಾಹನ ದೇವಸ್ಥಾನದ ಮುಂದೆ ಬಂದು ನಿಲ್ಲುವುದು ಹಾಗೂ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸೋಮವಾರದಂದು ಕಳ್ಳರಿಗಾಗಿ ಕಾಯುತ್ತ ಕುಳಿತ ಸಾರ್ವಜನಿಕರಿಗೆ ಕಳ್ಳರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ನಂದಿನ ಹಾಲಿನ ವಾಹನ ಧಾರವಾಡದಿಂದ ಅಂಕೋಲಾಕ್ಕೆ ಹಾಲು ಸರಬರಾಜು ಮಾಡುತ್ತಿತ್ತು ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಠಾಣಾ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.