ಅಂಕೋಲಾ :ನಮ್ಮ ಮನೆಯನ್ನು ಅಂದವಾಗಿಟ್ಟುಕೊಳ್ಳುತ್ತೇವೆ, ಆದರೆ ಹೊರಗೆ ಇಡುವುದಿಲ್ಲ, ಇದು ದೇಶದ ದೌರ್ಭಾಗ್ಯ-ಅನಂತ ಕುಮಾರ್
ಅಂಕೋಲಾ : ನಮ್ಮ ಮನೆಯನ್ನು ಅಂದವಾಗಿಟ್ಟುಕೊಳ್ಳುತ್ತೇವೆ ಆದರೆ ಮನೆ ಹೊರಗಿನ ಸಾರ್ವಜನಿಕ ಪ್ರದೇಶವನ್ನು ಸ್ವಚ್ಚವಾಗಿಡಲು ನಾವು ಮುಂದಾಗುವುದಿಲ್ಲ ಇದು ನಮ್ಮ ದೇಶದ ದೌರ್ಭಾಗ್ಯ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಅವರು ಜೇನುಗೂಡು ವಾಟ್ಸಅಫ್ ಗ್ರೂಫ್ ಕೇಣಿಯಲ್ಲಿ ಹಮ್ಮಿಕೊಂಡ 100 ನೇ ವಾರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪೊರಕೆಯನ್ನು ಹಿಡಿದು ಬೀದಿಯನ್ನು ಸ್ವಚ್ಛಗೊಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರಧಾನಿ ಮೋದಿ ಮೊದಲು ಪೊರಕೆಯನ್ನು ಹಿಡಿದು ಕಸವನ್ನು ಗುಡಿಸಲು ಪ್ರಾರಂಭಿಸಿದಾಗ ಕೆಲವರು ಟೀಕೆ ಮಾಡಿದ್ದರು. ಆದರೆ, ಈಗ ಅವರೇ ಮೋದಿಯ ಬಗ್ಗೆ ಹೊಗಳಲು ಪ್ರಾರಂಭಿಸಿದ್ದಾರೆ.
ಸ್ವಚ್ಛ ಭಾರತ ಅಭಿಯಾನಕ್ಕಿಂತ ಪೂರ್ವದಲ್ಲಿಯೇ ಈ ಜೇನುಗೂಡು ಹುಟ್ಟಿಕೊಂಡಿದ್ದು ಒಂದು ಇತಿಹಾಸ. ನಾವು ಮನೆಯನ್ನ ಕೆಳಗಿನಿಂದ ಮೇಲೆ ಕಟ್ಟುತ್ತೇವೆ ಆದರೆ, ಜೇನು ಮೇಲಿನಿಂದ ಕೆಳಗೆ ಗೂಡನ್ನು ಕಟ್ಟುತ್ತದೆ. ನಾವೆಲ್ಲರು ಒಟ್ಟೊಟ್ಟಿಗೆ ಹೆಜ್ಜೆ ಇಡುತ್ತಿದ್ದೇವೆ. ಪರಿಸರದ ಬಗ್ಗೆ ಸಾಮೂಹಿಕ ಬದುಕಿನಲ್ಲಿಯೂ ಶಿಸ್ತನ್ನ ತಂದಾಗ ಮಾತ್ರ ಭಾರತ ಸಂಪೂರ್ಣ ಸ್ವಚ್ಛವಾಗಲು ಸಾಧ್ಯ .
ಭ್ರಷ್ಟ ವ್ಯವಸ್ಥೆ ನಮ್ಮಲ್ಲಿ ಬೇರು ಬಿಟ್ಟಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದರೆ ಒಂದು ಸಭೆ ನಡೆಸಿ ಹೇಳಿದರೆ ಸಾಧ್ಯವಿಲ್ಲ. ಮನುಷ್ಯನ ಸಂಪರ್ಕವನ್ನು ಎಷ್ಟೆಷ್ಟು ಕಡಿತಗೊಳಿಸುತ್ತಾರೋ ಅಷ್ಟಷ್ಟು ಭ್ರಷ್ಟಾಚಾರ ಕಡಿಮೆಗೊಳಿಸಬಹುದು. ಕೇವಲ ತಂತ್ರಜ್ಞಾನದಿಂದ ಈ ಭ್ರಷ್ಟಾಚಾರ ತೊಲಗಿಸಲು ಸಾಧ್ಯ. ಚಿಕ್ಕ ಚಿಕ್ಕ ಕೆಲಸಗಳು ದೊಡ್ಡ ಕ್ರಾಂತಿಯನ್ನೆ ಹುಟ್ಟುಹಾಕುತ್ತವೆ. ರಕ್ತ ಹರಿಸಿದರೆ ಮಾತ್ರ ಕ್ರಾಂತಿಯಲ್ಲ. ನಮ್ಮನ್ನ ನಾವು ತಿಳಿದುಕೊಂಡರೆ ಅದು ನಿಜವಾದ ಕ್ರಾಂತಿ. ಆನೆ ತುಳಿದದ್ದೆ ದಾರಿ. ನಿಮ್ಮ ಹೆಜ್ಜೆ ಹೀಗಿರಲಿ ಎಂದರು.
ಊರ ಪ್ರಮುಖ ಹರಿಶ್ಚಂದ್ರ ನಾಯ್ಕ ಮಾತನಾಡಿದರು. ನ್ಯಾಯವಾದಿ ನಾಗಾನಂದ ಬಂಟ ಮನವಿ ನೀಡಿದರು. ಅನಂತ ಕಟ್ಟಿಮನೆ ನಿರೂಪಿಸಿದರು, ಅನಂತ ಕಟ್ಟಿಮನೆ ವಂದಿಸಿದರು.
ವೇದಿಕೆಯಲ್ಲಿ ದೈವಜ್ಞ ಸಂಘದ ರಾಜ್ಯಾಧ್ಯಕ್ಷ ರಾಮರಾವ್ ರಾಯ್ಕರ, ಅರುಣ ನಾಡಕರ್ಣಿ, ನಿತ್ಯಾನಂದ ಗಾಂವಕರ, ಜೇನುಗೂಡಿನ ಸಂಸ್ಥಾಪನಾಧ್ಯಕ್ಷ ವಿಶಾಲ ಬಂಟ, ಅಧ್ಯಕ್ಷ ವಿಜಯ ಬಂಟ ಉಪಸ್ಥಿತರಿದ್ದರು. ಜೇನುಗೂಡಿನ ಸದಸ್ಯರು, ಊರ ನಾಗರಿಕರು ಉಪಸ್ಥಿತರಿದ್ದರು.