ಅಕ್ಕಿ ಆಲೂರ : ವಿವಿಧತೆಯಲ್ಲಿ ಏಕತೆ ,ಮತೀಯ ಸಾಮರಸ್ಯ ,ಸಹೋದರತೆಯು ಭಾರತ ದೇಶದ ಸೌಂದರ್ಯವಾಗಿದ್ದು ,ಇದನ್ನು ಕಾಪಾಡಿಕೊಂಡು ಹೋಗಬೇಕಾಗಿರುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಗ್ಲೋಬಲ್ ಸೂಫಿ ಫೋರಮ ಅಧ್ಯಕ್ಷ ಯಾಸೀರ ಅರಾಫತ್ ಮಕಾನದಾರ ನುಡಿದರು.
ಅವರು ಹಾವೇರಿ ಜಿಲ್ಲೆ ಹಾನಗಲ್ಲ ತಾಲ್ಲೂಕಿನ ಅಕ್ಕಿ ಆಲೂರ ಪಟ್ಟಣದ ಸರಕಾರಿ ಉರ್ದು ಫ್ರೌಢ ಶಾಲೆಯಲ್ಲಿ ಗ್ಲೋಬಲ್ ಸೂಫಿ ಫೋರಮ ವತಿಯಿಂದ ಆಯೋಜಿಸಿದ್ದ " ಶಾಂತಿ ಮತ್ತು ಸೌಹಾರ್ದತೆಗಾಗಿ ಸೂಫಿಗಳ ಕೊಡುಗೆಗಳು " ಎಂಬ ವಿಷಯದ ಮೇಲೆ ವಿಚಾರ ಸಂಕೀರ್ಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಭಾರತ ಸೂಫಿ- ಸಂತರ ,ಋಷಿ - ಫಕೀರರ ದೇಶವಾಗಿದ್ದು , ರಾಜ ಮಹರಾಜರಿಗಿಂತ ಹೆಚ್ಚು ಸೂಫಿ ಸಂತರು ಈ ದೇಶದಲ್ಲಿ ಗೌರವಿಸಲ್ಪಡುತ್ತಾ ಬಂದಿದ್ದಾರೆಂದರು , ಇವರ ಜೀವನ ಹಾಗೂ ಸಂದೇಶಗಳು ಮನುಕುಲಕ್ಕೆ ಆದರ್ಶವಾಗಿದ್ದು ,ಧರ್ಮಾತೀತವಾಗಿ ಈ ದೇಶವನ್ನು ಕಟ್ಟಿದ ಕೀರ್ತಿ ಸೂಫಿ ಸಂತರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಪ್ರೇಮ ,ದಯೆ,ಸಾಮರಸ್ಯ ಹಾಗೂ ಸಹೋದರತೆಯು ಇವರ ಸಂದೇಶವಾಗಿದ್ದು , ಕ್ರೌರ್ಯದ ಬದಲಾಗಿ ಪ್ರೇಮದಿಂದ ಮನಸ್ಸಿನ ಬದಲಾವಣೆಗೆ ಇವರು ಹೆಚ್ಚು ಒತ್ತು ಕೊಟ್ಟಿದ್ದು , ಸೂಫಿ ಸಂತರ ದರ್ಗಾಗಳು ಈಗಲೂ ಸಾಮರಸ್ಯ ಸಾರುವ ಕೇಂದ್ರಗಳಾಗಿರುವದರಿಂದ ಧರ್ಮಾತೀತವಾಗಿ ಜನ ಸಮುದಾಯ ಅಲ್ಲಿಗೆ ಭೇಟಿ ನೀಡಿ ಪುನೀತ ಭಾವ ಬೀರುತ್ತಾರೆಂದರು .
ಅಜ್ಮೇರದ ಸೂಫಿ ಖ್ವಾಜಾ ಮೈನುದ್ದೀನ ಹಸನ್ ಚಿಸ್ತಿ (ಖ್ವಾಜಾ ಗರೀಬ ನವಾಜ ) ದೆಹಲಿಯ ಹಜರತ ನಿಜಾಮುದ್ದೀನ ಅಔಲಿಯಾ ,ಗುಲ್ಬರ್ಗದ ಖ್ವಾಜಾ ಬಂದೇನವಾಜ ಮುಂತಾದವರು ಭಾರತದ ಪ್ರಮುಖ ಸೂಫಿ ಸಂತರಾಗಿದ್ದು ,ಈಗಲೂ ಪ್ರತಿದಿನ ಲಕ್ಷಾಂತರ ಜನ ಇವರ ಸಮಾಧಿಗಳಿಗೆ ಭೇಟಿ ನೀಡುತ್ತಾರೆ ಹಾಗೂ ಇವರ ವಿಚಾರ - ಸಂದೇಶಗಳಿಂದ ಪ್ರಭಾವಿತರಾಗಿದ್ದರೆಂದರು .
ಮತೀಯ ಸಾಮರಸ್ಯ, ಶಾಂತಿ ಹಾಗೂ ಸಹೋದರತೆಗಾಗಿ ಸೂಫಿ ಸಂತರು ವಿಶಿಷ್ಟ ರೀತಿಯ ಕೊಡುಗೆಗಳನ್ನು ನೀಡಿದ್ದು ,ಬಹುತ್ವದಲ್ಲಿ ಏಕತೆಗಾಗಿ ಇವರು ನೀಡಿರುವ ಸಂದೇಶಗಳು ಈಗಲೂ ಪ್ರಸ್ತುತವಾಗಿದ್ದು ಅವುಗಳನ್ನು ಅನುಸರಿಸಿ ಮುಂದಿನ ತಲೆಮಾರಿಗೆ ರವಾನಿಸುವ ಗುರುತರವಾದ ಹೊಣೆಗಾರಿಕೆ ಪ್ರತಿಯೊಬ್ಬರದಾಗಿದೆ ಎಂದರು .
ಗ್ಲೋಬಲ್ ಸೂಫಿ ಫೋರಮ ಕಾರ್ಯದರ್ಶಿ ಮುಜೀಬುರ್ರಹ್ಮಾನ ಸೋಮಸಾಗರ ಮಾತನಾಡಿ ,ಸೂಫಿ ಸಂತರು ಮನುಕುಲಕ್ಕೆ ನೀಡಿರುವ ಚಿಂತನೆ ಹಾಗೂ ಸಂದೇಶಗಳ ಬಗ್ಗೆ ಹಾಗೂ ಇವರ ಜೀವನದ ಕುರಿತು ಉನ್ನತ ಮಟ್ಟದ ಅಧ್ಯಯನ ನಡೆಸುವದು ಅಗತ್ಯವಾಗಿದ್ದು ,ಈ ನಿಟ್ಟಿನಲ್ಲಿ ಗುಲ್ಬರ್ಗದ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೂಫಿ ಅಧ್ಯಯನ ಪೀಠ ಸ್ಥಾಪಿಸುವಂತೆ ಗ್ಲೋಬಲ್ ಸೂಫಿ ಫೋರಮ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಹಾಗೂ ಒತ್ತಾಯ ಮಾಡಲಾಗಿದ್ದು , ಸರ್ಕಾರ ಈ ಬಗ್ಗೆ ಸಕಾರಾತ್ಮಕವಾಗಿ ಕ್ರಮ ಕೈಕೊಳ್ಳುವ ವಿಶ್ವಾಸವಿದೆ ಎಂದರು.
ಉರ್ದು ಫ್ರೌಢ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಫಯಾಜ ಅಹ್ಮದ ಲಾಲಾನವರ ,ಮುಖ್ಯೋಪಾಧ್ಯಾಯ ದಯಾನಂದ ನಾಯಕ ,ಸಹಾರಾ ಕಲ್ಯಾಣ ವೇದಿಕೆ ಪ್ರಧಾನ ಕಾರ್ಯದರ್ಶಿ ಅಲ್ಲಾಬಕ್ಷ ಮಲ್ಲಿಗಾರ ,ಉಪಾಧ್ಯಾಯರಾದ ಶ್ರೀಮತಿ ಎಸ್ ಎ ಬಂಕಾಪುರ ,ಶ್ರೀಮತಿ ಎಂ ಎನ್ ಮಕಾನದಾರ, ಎಸ್ ಟಿ ಬಣಕಾರ ,ಆರ್ ಎಂ ಕೊಡಲಿ ವೇದಿಕೆಯ ಮೇಲಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಸಬಾ ಅಂಜುಮ ಹೊಂಡದ ,ಮಹ್ಮದ ಗೌಸ ಮುಲ್ಲಾ ,ಬಾಬಾಜಾನ ಸುತಾರ ರವರಿಗೆ ಪ್ರಥಮ ,ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪ್ರಮಾಣಗಳನ್ನು ವಿತರಿಸಲಾಯಿತು.
ವಿದ್ಯಾರ್ಥಿನಿ ಹುಸ್ನಾ ಇಮ್ಮುಸಾಬನವರ ಪ್ರಾರ್ಥಿಸಿದರು ,ರಹೀಮಾ ದೇವಿಹೊಸುರ ಸ್ವಾಗತಿಸಿದರು, ಶಹಜಾದಬಿ ಬ್ಯಾತನಾಳ ವಂದಿಸಿದರು ,ಪ್ರಾಧ್ಯಾಪಕ ಎಸ್ ಎಸ್ ಪೀರಜಾದೆ ನಿರೂಪಿಸಿದರು.