ಬೆಂಗಳೂರು: ರಾಜ್ಯದ ಮೂವರು ಸರಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದ ಪ್ರಕರಣ ಸಂಬಂಧ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ.
ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಬಿ.ವಿಜಯಕುಮಾರ್ ನಿರಾಳಿ ಅವರ ರೈಲ್ವೆ ಸಮಾನಾಂತರ ರಸ್ತೆಯಲ್ಲಿರುವ ಕಚೇರಿ, ಮನೆಗಳ ಮೇಲೆ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿದಾಗ, 2 ಮನೆಗಳು, ಮಂಗಳೂರು ಹಾಗೂ ಬೆಂಗಳೂರು ನಗರದಲ್ಲಿ 5 ಗುಂಟೆ ವಿಸ್ತೀರ್ಣದ 2 ನಿವೇಶನಗಳು ಒಳಗೊಂಡಂತೆ ಒಟ್ಟು 4 ನಿವೇಶನಗಳು, 276 ಗ್ರಾಂ ಚಿನ್ನ, 3,700 ಗ್ರಾಂ ಬೆಳ್ಳಿ, 2 ಕಾರು, 2 ಬೈಕ್ 10.59 ಲಕ್ಷ ನಗದು, 20 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಗಂಗಯ್ಯ ಮನೆ ಮೇಲೆ ದಾಳಿ ನಡೆಸಿದಾಗ, 1 ಮನೆ, 4 ನಿವೇಶನಗಳು, 4.36 ಎಕರೆ ಕೃಷಿ ಜಮೀನು, 0.5ಎಕರೆ ಕೈಗಾರಿಕಾಭಿವೃದ್ದಿ ಭೂಮಿ, 220 ಗ್ರಾಂ ಚಿನ್ನ, 670 ಬೆಳ್ಳಿ ಗ್ರಾಂ, ಒಂದು ಕಾರು, ಬೈಕ್, 64 ಸಾವಿರ ನಗದು, 15 ಲಕ್ಷ ಗೃಹೋಪಯೋಗಿ ವಸ್ತುಗಳು ಕಂಡು ಬಂದಿವೆ.
ಅರಣ್ಯ ಇಲಾಖೆಯ ಚಿಕ್ಕಮಗಳೂರು ಎಸಿಎಫ್ ಕೆ.ಎನ್.ರಂಗಸ್ವಾಮಿ ಬಳಿ, 1 ವಾಸದ ಮನೆ, ಕೊಪ್ಪಳ ತಾಲೂಕಿನಲ್ಲಿ 6 ಎಕರೆ ಕೃಷಿ ಭೂಮಿ, 585 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ, ಎರಡು ಕಾರು, 2.53 ಲಕ್ಷ ನಗದು, 3 ಲಕ್ಷ ಗೃಹೋಪಯೋಗಿ ವಸ್ತುಗಳಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಜು.17ರಂದು ಮೂವರು ಸರಕಾರಿ ಅಧಿಕಾರಿಗಳಿಗೆ ಸಂಬಂಧಪಟ್ಟಂತೆ ರಾಜ್ಯದ ಎಂಟು ಸ್ಥಳಗಳಲ್ಲಿ ಏಕಾಏಕಿ ಎಸಿಬಿ ತನಿಖಾಧಿಕಾರಿಗಳು ನಡೆಸಿದ್ದರು. ಪ್ರಕರಣ ಸಂಬಂಧ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರೆದಿದೆ.