ಪಾಕ್ನೊಳಗೆ ಭಾರತೀಯ ವಾಯುಪಡೆ ದಾಳಿಗೆ 200 ಉಗ್ರರು ಹತ
ಹೊಸದಿಲ್ಲಿ: ಭಾರತೀಯ ವಾಯುಪಡೆಯ(ಐಎಎಫ್) 12 ಮಿರಾಜ್-2000 ಯುದ್ಧ ವಿಮಾನಗಳು ಮಂಗಳವಾರ ಬೆಳಗ್ಗಿನ ಜಾವ ಪಾಕಿಸ್ತಾನದ ಬಾಲಾಕೋಟ್ ಮೇಲೆ 1,000 ಕೆಜಿ ಬಾಂಬ್ಗಳನ್ನು ಸುರಿದ ಪರಿಣಾಮ ಸುಮಾರು 200 ಉಗ್ರರು ಹತರಾಗಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿದ್ದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.
ಪಾಕ್ ಮೂಲದ ಜೆಇಎಂ ಉಗ್ರ ಸಂಘಟನೆ ಮತ್ತೊಂದು ಆತ್ಮಾಹುತಿ ದಾಳಿಗೆ ಪ್ರಯತ್ನಿಸುತ್ತಿದೆ ಎಂಬ ಗುಪ್ತಚರ ಮೂಲಗಳ ಮಾಹಿತಿಯ ಮೇರೆಗೆ ಐಎಎಫ್ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದೆ. ದಾಳಿಯಲ್ಲಿ ಮಸೂದ್ ಅಝರ್ನ ಬಾವ ವೌಲಾನ ಯೂಸುಫ್ ಅಝರ್ ಹತ್ಯೆಯಾಗಿದ್ದಾನೆಂದು ವರದಿಯಾಗಿದೆ.
1971ರ ಯುದ್ದದ ಬಳಿಕ ಇದೇ ಮೊದಲ ಬಾರಿ ಭಾರತೀಯ ವಾಯು ಪಡೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ಪ್ರವೇಶಿಸಿ ಏರ್ ಸ್ಟ್ರೈಕ್ ನಡೆಸಿದೆ.
ಇಂದು ಸರ್ವಪಕ್ಷ ಸಭೆ: ಪಾಕ್ನೊಳಗೆ ಐಎಎಫ್ ದಾಳಿ ನಡೆಸಿದ್ದನ್ನು ಪಕ್ಷಬೇಧ ಮರೆತು ಎಲ್ಲರೂ ಅಭಿನಂದನೆ ಸಲ್ಲಿಸಿದ್ದು, ವಿದೇಶಾಂಗ ಖಾತೆ ಸಚಿವೆ ಸುಶ್ಮಾ ಸ್ವರಾಜ್ ಮಂಗಳವಾರ ಸರ್ವಪಕ್ಷ ಸಭೆ ಕರೆದಿದ್ದಾರೆ.
1971ರ ಯುದ್ಧದ ನಂತರ ಮೊದಲ ಬಾರಿಗೆ ಗಡಿಯಾಚೆ ನುಗ್ಗಿದ ಐಎಎಫ್
ಹೊಸದಿಲ್ಲಿ: ಭಾರತೀಯ ವಾಯುಪಡೆಯ ಮಿರಾಜ್ ಯುದ್ಧ ವಿಮಾನಗಳು ಗಡಿಯಾಚೆಗಿನ ಉಗ್ರ ತಾಣಗಳ ಮೇಲೆ ದಾಳಿ ನಡೆಸಿ ಪುಲ್ವಾಮ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಿದೆ. 1971ರ ಯುದ್ಧದ ನಂತರ ಇದೇ ಮೊದಲ ಬಾರಿಗೆ ಐಎಎಫ್ ಗಡಿಯಾಚೆಗೆ ನುಗ್ಗಿದೆ ಎಂದು timesofindia ವರದಿ ಮಾಡಿದೆ.
ಫೆಬ್ರವರಿ 14ರಂದು ನಡೆದ ಪುಲ್ವಾಮ ದಾಳಿಯಲ್ಲಿ 40ಕ್ಕೂ ಅಧಿಕ ಸೈನಿಕರು ಹುತಾತ್ಮರಾದ ನಂತರ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಾಲಕೋಟ್ ನಲ್ಲಿ ಐಎಎಫ್ 1000 ಕೆ.ಜಿ. ಬಾಂಬ್ ಗಳನ್ನು ಸುರಿದಿದೆ ಎಂದು ವರದಿಯಾಗಿದೆ. ಮುಝಫ್ಫರಬಾದ್ ಮತ್ತು ಚಕೋಟಿಯಲ್ಲಿ ಉಗ್ರ ತಾಣಗಳು ಸಂಪೂರ್ಣ ನಾಶವಾಗಿದೆ.
ಉಗ್ರತಾಣಗಳ ಧ್ವಂಸಗೈದು ಭಾರತಕ್ಕೆ ಹೆಮ್ಮೆ ತಂದ ವಾಯುಪಡೆಗೆ ಶಹಬ್ಬಾಸ್ ಎಂದ ದೇಶದ ಜನತೆ
ಹೊಸದಿಲ್ಲಿ: ಗಡಿಯಾಚೆಗೆ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ ಭಾರತೀಯ ವಾಯುಪಡೆಯ ಸಾಧನೆಯನ್ನು ದೇಶಾದ್ಯಂತ ನಾಗರಿಕರು, ರಾಜಕಾರಣಿಗಳು, ಕ್ರೀಡಾಪಟುಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ಯಾಪ್, ಟ್ವಿಟರ್ ಗಳಲ್ಲಿ ದೇಶದ ಎಲ್ಲಾ ಧರ್ಮ, ಜಾತಿಗಳ ಜನರು ವಾಯುಪಡೆಯ ಸಾಹಸಕ್ಕೆ ಶಹಬ್ಬಾಸ್ ಎಂದಿದ್ದಾರೆ. ಪಕ್ಷ ಬೇಧ ಮರೆತು ರಾಜಕಾರಣಿಗಳು ಸೇನೆಯ ಸಾಹಸವನ್ನು ಮೆಚ್ಚಿದ್ದಾರೆ. ಇಂದು ಗಡಿಯಾಚೆಗೆ ಲಗ್ಗೆಯಿಟ್ಟ ವಾಯುಪಡೆಯ ವಿಮಾನಗಳು ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದೆ. ಸುಮಾರು 300 ಉಗ್ರರು ಹತರಾಗಿದ್ದಾರೆ ಎಂದು ಸರಕಾರಿ ಮೂಲಗಳು ಮಾಹಿತಿ ನೀಡಿವೆ.
ವಾಯುಪಡೆಯ ಸಾಹಸವನ್ನು ಮೆಚ್ಚಿ ಪ್ರಧಾನಿ ಮೋದಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ರಾಹುಲ್ ಗಾಂಧಿ, ಒಮರ್ ಅಬ್ದುಲ್ಲಾ ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಅಮಿತ್ ಶಾ ಮತ್ತಿತರ ರಾಜಕೀಯ ನಾಯಕರು ಟ್ವೀಟ್ ಮಾಡಿದ್ದಾರೆ.
“ಈ ದಾಳಿ ಪಾಕಿಸ್ತಾನಕ್ಕೆ ಮುಖಭಂಗ” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬಣ್ಣಿಸಿದ್ದಾರೆ. “ಇದು ಯಾರ ಕಲ್ಪನೆಗೂ ಬಾರದ ದಾಳಿ” ಎಂದು ಅವರು ಹೇಳಿದ್ದಾರೆ. “ಬಾಲಕೋಟ್ ವಾಯುದಾಳಿಯೊಂದಿಗೆ ನಾವು ಹೊಸ ಆಯಾಮ ಪ್ರವೇಶಿಸಿದ್ದೇವೆ. ಉರಿ ದಾಳಿ ಬಳಿಕ ನಡೆದ ದಾಳಿ ಪ್ರತೀಕಾರದ ಕ್ರಮವಾಗಿದ್ದರೆ, ಬಾಲಕೋಟ್ ದಾಳಿ ಜೆಇಎಂ ದಾಳಿ ತಡೆಯಲು ಅನಿವಾರ್ಯವಾಗಿತ್ತು” ಎಂದು ಹೇಳಿದ್ದಾರೆ.
"ಭಾರತೀಯ ವಾಯುಪಡೆ ಪೈಲಟ್ ಗಳ ಸಾಹಸಕ್ಕೆ ದೊಡ್ಡ ಸೆಲ್ಯೂಟ್ ಸಲ್ಲಬೇಕು. ಪಾಕಿಸ್ತಾನದ ಉಗ್ರರ ಗುಂಪಿನ ಮೇಲೆ ದಾಳಿ ಮಾಡುವ ಮೂಲಕ ನಾವು ಹೆಮ್ಮೆಪಡುವಂತೆ ಮಾಡಿದ್ದಾರೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ವಾಯುಪಡೆಯ ಪೈಲಟ್ ಗಳಿಗೆ ಸೆಲ್ಯೂಟ್ ಹೇಳಲೇಬೇಕು ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ. ವಾಯುಪಡೆಯನ್ನು ಶ್ಲಾಘಿಸಿರುವ ಬಿಎಸ್ಪಿ ನಾಯಕಿ ಮಾಯಾವತಿ, ಮೋದಿ ಸರ್ಕಾರ ಈ ಮೊದಲೇ ರಕ್ಷಣಾ ಪಡೆಗಳಿಗೆ ಮುಕ್ತಹಸ್ತ ನೀಡಿದ್ದರೆ ಉರಿ, ಪಠಾಣ್ ಕೋಟ್ ನಂತಹ ದಾಳಿ ತಡೆಯಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.