ಓವರಟೇಕ ವಾಹನ ತಪ್ಪಿಸಲು ಹೋಗಿ ಪುಟ್ಪಾತ ಮೇಲೆ ವಾಲಿದ ಡಿಸೇಲ್ ಲಾರಿ
ಭಟ್ಕಳದ ಪ್ರವಾಸಿ ಮಂದಿರದ ಎದುರಿನ ರಾಷ್ಟ್ರೀಯ ಹೆದ್ದಾರಿ -66 ಬಳಿ ಶುಕ್ರವಾರದಂದು ತಡರಾತ್ರಿ ಡಿಸೇಲ್ ಸಾಗಿಸುತ್ತಿದ್ದ ಲಾರಿಯೊಂದು ಹೆದ್ದಾರಿ ಪಕ್ಕದ ಚರಂಡಿಗೆ ಆಯತಪ್ಪಿ ಒಂದು ಕಡೆ ವಾಲಿ ಬಿದ್ದ ಪರಿಣಾಮ ಡಿಸೇಲ್ ರಸ್ತೆಯ ತುಂಬೆಲ್ಲ ಚೆಲ್ಲಿದ್ದು ಶನಿವಾರದಂದು ಲಾರಿಯನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಯಿತು.
ಡಿಸೇಲ್ ಲಾರಿಯೂ ಮಂಗಳೂರಿನಿಂದ ಕೋಲಾರದ ಕಡೆಗೆ ತೆರಳುತ್ತಿದ್ದ ವೇಳೆ ಇಲ್ಲಿನ ಪ್ರವಾಸಿ ಮಂದಿರದ ಎದುರಿಗೆ ಓವರಟೇಕ ಮಾಡಿಕೊಂಡು ಬಂದ ವಾಹನ ತಪ್ಪಿಸಲು ಹೋಗಿ ಲಾರಿ ಚಾಲಕ ಲಾರಿಯನ್ನು ಪಕ್ಕಕ್ಕೆ ತಿರುಗಿಸಿದ್ದಾನೆ. ಈ ವೇಳೆ ಲಾರಿಯ ಚಕ್ರ ಚರಂಡಿ ಕಡೆ ವಾಲಿದ್ದು, ಇದರಿಂದ ಪುಟ್ಪಾತ ಮೇಲೆ ಡಿಸೇಲ್ ಚೆಲ್ಲಿದ್ದು ಭಾಗಶಃ ಲಾರಿ ಚರಂಡಿಗಿಳಿದಿದೆ. ರಸ್ತೆಯ ಮೇಲೆ ಚೆಲ್ಲಿದ ಡಿಸೇಲ್ ನಿಂದ ಜನರು ಭಯಬೀತರಾಗಿದ್ದಾರೆ.
ತಕ್ಷಣಕ್ಕೆ ಶನಿವಾರದಂದು ಬೆಳಿಗ್ಗೆ ಸ್ಥಳಕ್ಕೆ ಅಗ್ನಿ ಶಾಮಕ ದಳ ಠಾಣಾಧಿಕಾರಿ ರಮೇಶ ಶೆಟ್ಟಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಡಿಸೇಲ್ ರಸ್ತೆಯ ಮೇಲೆ ಚೆಲ್ಲಿದ ಹಿನ್ನೆಲೆ ತಕ್ಷಣಕ್ಕೆ ಕಾರ್ಯಾಚರಣೆಗಿಳಿದು ಬೈಂದುರಿನಿಂದ ಹಾಜಿ ಕ್ರೇನ್ ಮೂಲಕ ಶನಿವಾರದಂದು ಮಧ್ಯಾಹ್ನ ಚರಂಡಿಗಿಳಿದಿದ್ದ ಲಾರಿಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿಯನ್ನು ಮೇಲಕ್ಕೆತ್ತಲು ಹೆದ್ದಾರಿಯನ್ನು ಕೆಲ ಕಾಲಸಂಚಾರ ಬಂದ್ ಮಾಡಲಾಗಿದ್ದು, ಕಿ.ಮೀ. ದೂರದವರೆಗೆ ಟ್ರಾಫಿಕ್ ಜಾಮ್ ಸಂಭವಿಸಿತು. ಈ ಸಂಧರ್ಭದಲ್ಲಿ ನಗರ ಠಾಣೆ ಪಿಎಸೈ ಬಸವರಾಜ್ ಹಾಗೂ ಸಿಬ್ಬಂದಿಗಳು ಕಾರ್ಯಚರಣೆಗೆ ಸಾಥ್ ನೀಡಿದರು.