ಭಟ್ಕಳ: ತಾಲೂಕಿನ ಹುರುಳಿಸಾಲಿನ ನಿವಾಸಿಗಳಾದ ವೃತ್ತಿಯಲ್ಲಿ ಶಿಕ್ಷಕರಾದ ವೆಂಕಟೇಶ ನಾರಾಯಣ ನಾಯ್ಕ ಪಟೇಲರಮನೆ ಇವರ ತಂದೆ ತಾಯಿಗಳ ಅಕಾಲಿಕ ಮರಣದಿಂದ ಅವರ ಮರಣ ದಿನದ ಸವಿನೆನಪಿಗಾಗಿ ಕಳೆದ 8 ವರ್ಷದಿಂದ ಇಲ್ಲಿನ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸುತ್ತಾ ಬಂದಿದ್ದು, ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ನೀರು ತೆರಳಿ ವಿದ್ಯಾರ್ಥಿಗಳಿಗೆ ನೋಟ್ ವಿತರಿಸಿದರು.
ನೋಟಬುಕ್ ವಿತರಣೆ ಮಾಡಿ ಮಾತನಾಡಿದ ಶಿಕ್ಷಕ ವೆಂಕಟೇಶ ನಾರಾಯಣ ನಾಯ್ಕ ‘ವಿದ್ಯಾರ್ಥಿಗಳ ಭವಿಷ್ಯದ ದಿಸೆಯಿಂದ ಹಾಗೂ ತಂದೆ-ತಾಯಿಗಳ ಸವಿನೆನಪಿಗಾಗಿ ಉಚಿತ ನೋಟ್ ಬುಕ್ ವಿತರಿಸಲಾಗುತ್ತಿದೆ. ದುಡಿಮೆಯ ಒಂದು ಭಾಗವನ್ನು ಸಮಾಜಮುಖಿ ಕೆಲಕ್ಕೆ ಪ್ರತಿ ವರ್ಷ ತೆಗೆದಿಡಲಾಗುತ್ತಿದ್ದು, ಈ ವರ್ಷ ನಮ್ಮದೇ ಶಾಲೆಯಲ್ಲಿ ಕಲಿಯುತ್ತಿರುವ ಅನಾಥ ಇಬ್ಬರು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಮುಂದಿನ ವಿದ್ಯಾಬ್ಯಾಸಕ್ಕೆ ನೆಲೆ ಕಂಡುಕೊಳ್ಳುವವರೆಗೆ ಅವರನ್ನು ಸಾಕಲಿದ್ದೇವೆ. ನನ್ನ ಮಡದಿ ಜಯಲಕ್ಷ್ಮೀ ನಾಯ್ಕ ಅವರ ಸಹಕಾರದಿಂದ ಕುಟುಂಬದವರ ಸಹಕಾರದಿಂದ ಈ ಕಾರ್ಯ ಮಾಡುತ್ತಿದ್ದೇನೆ.
ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರು ತಂದೆತಾಯಿಗಳ ಹಾಗೂ ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ. ನಾನು ಮಾಡಿದ ಕಾರ್ಯವನ್ನು ಮುಂದಿನ ದಿನದಲ್ಲಿ ದುಡಿಯುವ ವೇಳೆ ನಿಮ್ಮದಿಂದಾಗುವಷ್ಟು ಸಹಾಯ ಸೇವೆ ಮಾಡಿ ಎಂದು ಕರೆ ನೀಡಿದರು.
ಕುಕ್ನೀರು ಶಾಲೆ ಮುಖ್ಯ ಶಿಕ್ಷಕಿ ರೇಖಾ ಪಟಗಾರ ‘ 8 ವರ್ಷದಿಂದ ಸಮಾಜಮುಖಿ ಸೇವೆಯನ್ನು ಮಾಡಿಕೊಂಡು ಬಂದಿರುವ ಇವರ ಜೀವನ ಸುಖವಾಗಿರಲಿ, ಇವರ ತಂದೆತಾಯಿಗಳ ಆತ್ಮಕ್ಕೆ ಶಾಂತಿ ಸಿಗಲಿ, ಇನ್ನು ಹೆಚ್ಚಿನ ಸೇವೆ ಮಾಡುವ ಶಕ್ತಿ ದೇವರು ನೀಡಲಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಕುಕ್ನೀರು ಶಾಲಾ ವಿದ್ಯಾರ್ಥಿಗಳಿಗೆ 100ಉಚಿತ ನೋಟ್ ಬುಕ್ ವಿತರಿಸಿದರು. ಈ ವರ್ಷ ಒಟ್ಟು 100 ವಿದ್ಯಾರ್ಥಿಗಳಿಗೆ 500 ಉಚಿತ ನೋಟ್ ಬುಕ್ನ್ನು ತಾಲೂಕಿನ ಆಯ್ದ ಶಾಲೆಗಳಿಗೆ ತೆರಳಿ ವಿತರಿಸಿದರು.
ಈಗಿನ ಇಲೆಕ್ಟ್ರಾನಿಕ ಜೀವನ ಶೈಲಿಯಲ್ಲಿ ಸಾಕಿದ ತಂದೆ ತಾಯಿಗಳನ್ನು ಅನಾಥಾಶ್ರಾಮಕ್ಕೊ ಅಥವಾ ದಾರಿಯ ಮೇಲೋ ಮನೆಯಿಂದ ಹೊರಗೆ ಹಾಕುವ ಮಕ್ಕಳ ನಡುವೆ ಅವರ ಅಕಾಲಿಕ ಮರಣದಿಂದ ನೊಂದು ಅವರ ಸವಿನೆನಪನ್ನು ಉತ್ತಮ ಕಾರ್ಯ ಮಾಡುವುದರೊಂದಿಗೆ ಸಾರ್ಥಕತೆಯನ್ನು ಮೆರೆದಿದ್ದಾರೆ.
ಈ ಸಂಧರ್ಭದಲ್ಲಿ ಬೆಟ್ಕೂರ್ ಸಿಆರ್ಪಿ ಶ್ರೀಮತಿ ಶ್ವೇತಾ ನಾಯ್ಕ, ತೆಂಗಿನಗುಡಿ ಶಾಲೆಶಿಕ್ಷಕ ಸಿ.ಡಿ.ಪಡುವಡಿ ಉಪಸ್ಥಿತರಿದರು.