ಭಟ್ಕಳ:ಗುರುವಾರದಂದು ಬೆಳಿಗ್ಗೆ ಇಲ್ಲಿನ ಆರ್. ಎನ್. ಎಸ್. ಸಭಾಭವನದಲ್ಲಿ ಯೋಗ ಸಮಿತಿ ಮುರ್ಡೇಶ್ವರದ ವತಿಯಿಂದ ನಡೆದ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸುನಿಲ ನಾಯ್ಕ ‘ಇಂದು ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ನಾನು ಯೋಗವನ್ನು ಮಾಡಿದ್ದು, ಇದರಿಂದ ಜೀವನದ ಮೌಲ್ಯವನ್ನು ಅರಿತಿದ್ದೇನೆ. ಇವತ್ತಿನ ಒತ್ತಡ ಜೀವನದ ಮಧ್ಯೆ ಮನಸ್ಸನ್ನು ಹೇಗೆ ನಿಯಂತ್ರಿಸಲು ಸಾಧ್ಯ ಎಂಬುದನ್ನು ಯೋಗದಿಂದ ನಾವು ತಿಳಿದುಕೊಳ್ಳಲು ಸಾಧ್ಯ. ಯೋಗವು ಜೀವನಕ್ಕೆ ಅತೀ ಅವಶ್ಯಕವಾಗಿದ್ದು, ಇದು ಒಂದು ದಿನಕ್ಕೆ ಸೀಮಿತವಾಗದೇ ಜೀವನದುದ್ದಕ್ಕೂ ನಡೆಸಿದ್ದಲ್ಲಿ ದೇಹ, ಮನಸ್ಸು ಆರೋಗ್ಯವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಯೋಗ ಗುರು ಡಾ. ಮಂಜುನಾಥ ಮಾತನಾಡಿ ‘ಯೋಗಕ್ಕೆ ವಿಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಒಂದು ಹಂತಕ್ಕೆ ವೇಗ ಸಿಕ್ಕಿದ್ದು, ಸ್ವತಃ ಅವರೇ ಯೋಗಾಸನ, ಪ್ರಾಣಾಯಾಮ ಮಾಡಿ ಯೋಗಾಸಕ್ತರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ. ಯೋಗ ಜೀವನದ ಒಂದು ಭಾಗವಾಗಬೇಕು. ಇದರಿಂದ ದೇಹ, ಮನಸ್ಸು, ಶರೀರ ಶುದ್ಧವಾಗುತ್ತದೆ. ಒಂದು ದಿನಕ್ಕೆ ಯೋಗ ಮಾಡಿದರೆ ಅದು ಶೂನ್ಯ ಸಾಧನೆಯಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಸಮಿತಿಯ ಗೌರವಾಧ್ಯಕ್ಷ ನಾಗರಾಜ ಭಟ್ಟ ಮಾತನಾಡಿ ‘ಕೆಲ ವರ್ಷಗಳ ಹಿಂದೆ ದೇಶದಲ್ಲಿ ಕೆಲವರಿಗೆ ಮಾತ್ರ ಯೋಗದ ಮಾಹಿತಿ, ಕಲ್ಪನೆ ತಿಳಿದಿದ್ದು, ಇದನ್ನು ವಿಶ್ವಮಟ್ಟಕ್ಕೆ ಆಸಕ್ತಿ ಹುಟ್ಟುವ ರೀತಿ ಪರಿಚಯಿಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ಪ್ರತಿ ದಿನ ಯೋಗಾಸನ, ಪ್ರಾಣಾಯಾಮ, ಧ್ಯಾನ ಸೇರಿದಂತೆ ಯೋಗದ ಅಳವಡಿಕೆಯಿಂದ ರೋಗ ರುಜಿನಗಳು ದೂರವಾಗಿ ಆರೋಗ್ಯಕರ ಜೀವನ ಸಾಗಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯೋಗಾಭ್ಯಾಸ ಮಾಡಿಸಿದ ಇಬ್ಬರು ಯೋಗ ಗುರುಗಳಾದ ಡಾ. ಮಂಜುನಾಥ್ ಹಾಗೂ ಓಂಕಾರ್ ಮರಬಳ್ಳಿ ಅವರಿಗೆ ಶಾಸಕ ಸುನಿಲ್ ನಾಯ್ಕ ಸನ್ಮಾನಿಸಿದರು.
ನಂತರ ಯೋಗ ಸಮಿತಿ ಮುರ್ಡೇಶ್ವರವತಿಯಿಂದ ಶಾಸಕ ಸುನಿಲ ನಾಯ್ಕ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೂ ಪೂರ್ವದಲ್ಲಿ ಬೆಳಿಗ್ಗೆ 6 ಗಂಟೆಯಿಂದ 7.30ರ ತನಕ ಯೋಗ ಗುರು ಡಾ. ಮಂಜುನಾಥ್ ನೇತೃತ್ವದಲ್ಲಿ 150ಕ್ಕೂ ಅಧಿಕ ಯೋಗಾಸಕ್ತರಿಗೆ ಯೋಗಾಭ್ಯಾಸವನ್ನು ಮಾಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಯೋಗಾಸಕ್ತರಿಗೆ ಸಮಿತಿ ವತಿಯಿಂದ ಒಂದೊಂದು ಗಿಡವನ್ನು ನೀಡುವುದರ ಮೂಲಕ ವಿನೂತನವಾಗಿ ಕಾರ್ಯಕ್ರಮವನ್ನು ನಡೆಸಲಾಯಿತು.
ಸಮಿತಿ ಅಧ್ಯಕ್ಷ ಮಂಜಪ್ಪ ನಾಯ್ಕ ಸ್ವಾಗತಿಸಿದರೆ, ಉಪಾಧ್ಯಕ್ಷ ವಿಷ್ಣು ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ಗಣಪತಿ ಕಾಯ್ಕಣಿ ನಿರೂಪಿಸಿದರು.