ಭಟ್ಕಳ: ಇಲ್ಲಿಗೆ ಸಮೀಪ ಮುರುಡೇಶ್ವರಕ್ಕೆ ಬಂದ ಪ್ರವಾಸಿಗರು ಸಮುದ್ರದಲ್ಲಿ ಈಜುತ್ತಿರುವಾಗ ಸಮುದ್ರದಲೆಗೆ ಸಿಲುಕಿ ಮುಳುಗುತ್ತಿರುವ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಲೈಫ್ ಗಾರ್ಡ್ಸ್ಗಳು ಇಬ್ಬರು ಪ್ರವಾಸಿಗರನ್ನು ರಕ್ಷಿಸಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿಗಳ ೮ ಜನರ ತಂಡ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದು ಶನಿವಾರ ಸಮುದ್ರದಲ್ಲಿ ಈಜಲು ತೆರಳಿದ್ದರು ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಸಮುದ್ರದಲೆಗೆ ಸಿಲುಕಿ ನೀರಿನಲ್ಲಿ ಮುಳುಗುತ್ತಿರುವ ಇಬ್ಬರನ್ನು ಸಮುದ್ರದಡದಲ್ಲಿ ಪ್ರವಾಸಿಗರ ರಕ್ಷಣೆಗೆಂದು ನೇಮಕಗೊಂಡಿರುವ ಲೈಫ್ ಗಾರ್ಡ್ಸ್ಗಳು ಕೂಡಲೇ ತಮ್ಮ ಜೀವದ ಹಂಗು ತೊರೆದು ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಲೈಫ್ ಗಾರ್ಡ್ಸ್ಗಳಿಂದ ರಕ್ಷಣೆಗೊಳಗಾದವರನ್ನು ಕಲಘಟಗಿ ತಾಲೂಕಿನ ತಾರಿಯಾಳ ಗ್ರಾಮದ ಚೆನ್ನಬಸವಾ(೩೨) ಮತ್ತು ಶಾಣಪ್ಪ(೨೩) ಎಂದು ಗುರುತಿಸಲಾಗಿದ್ದು ಇವರು ಬಟ್ಟೆ ವ್ಯಾಪಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.