ಕಾರವಾರ :ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಅತೀವೃಷ್ಠಿ, ಪ್ರವಾಹ ಹಾಗೂ ಕೊಳೆರೋಗಕ್ಕೆ ಸುಮಾರು 16,955 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಪ್ರಸಕ್ತ ಮುಂಗಾರಿನಲ್ಲಿ ಉತ್ತರ ಕನ್ನಡ ಜಿಲ್ಲೆನಿರಂತರವಾಗಿ ಸುರಿದ ಭಾರೀ ಮಳೆಗೆ ಅಡಿಕೆ ಮತ್ತು ಮೆಣಸು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು ಜಿಲ್ಲಾದ್ಯಂತ 16,955 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿರುವ ಬಗ್ಗೆ ಈಗಗಲೇ ತೋಟಗಾರಿಕೆ ನಿರ್ದೇಶನಾಲಯಕ್ಕೆ ವರದಿ ಸಲ್ಲಿಸಿರುವುದಗಿ ತೋಟಗಾರಿಕೆ ಉಪ ನಿರ್ದೇಶಕ ಶಶಿಕಾಂತ್ ಕೋಟಿಮನಿ ತಿಳಿಸಿದ್ದಾರೆ.
ಅತಿ ಹೆಚ್ಚು ಶಿರಸಿ ತಆಲೂಕಿನಲ್ಲಿ 6815.76 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದ್ದರೆ ಸಿದ್ದಾಪುರ 4458.97 ಹೆಕ್ಟೇರ್, ಯಲ್ಲಾಪುರದಲ್ಲಿ 3223 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.
ಕೊಳೆರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಬೆಳೆಗಾರರು ಔಷಧಗಳನ್ನು ಖರೀದಿಸಲು ಕೀಟರೋಗ ನಿರ್ವಹಣೆ ಯೋಜನೆಯಡಿ ಶೆ.75ರಷ್ಟು ಸಹಾಯಧನ ನೀಡಲಾಗುತ್ತಿದೆ. ಮೈಲುತುತ್ತ, ಸುಣ್ಣ ಖರೀದಿಸಿದ ರೈತರಿಗೆ ಈಗಾಗಲೇ ಸಹಾಯಧನ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ಅಲ್ಲದೆ, ಹಾರ್ಟಿಕ್ಲಿನಿಕ್ ಮೂಲಕ ತೋಟಗಾರಿಕೆ ಬೆಳೆಗಾರರಿಗೆ ವಿಷಯ ತಜ್ಞರಿಂದ ಸೂಕ್ತ ಮಾಹಿತಿ ಸಲಹೆಗಳನ್ನು ನೀಡಲಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿ ಸಿಬ್ಬಂದಿಗಳು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾಲ ಕಾಲಕ್ಕೆ ಸಮಪ್ರಮಾಣದಲ್ಲಿ ರಸಗೊಬ್ಬರ ಹಾಗೂ ಔಷಣ ಸಿಂಪಡಣೆ ಬಗ್ಗೆ ಸೂಕ್ತ ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಅತೀವೃಷ್ಠಿ ತೀವ್ರ ಪ್ರಮಾಣದಲ್ಲಿ ಆಗಿರುವ ಕೆಲವು ಭಾಗಗಳಲ್ಲಿ ಚಂಡೆಕೊಳೆ ರೋಗ ಕಂಡುಬರುತ್ತಿದ್ದು ಅಡಿಕೆ ಬೆಳೆಗಾರರು ತಕ್ಷಣ ಅಂತರವ್ಯಾಪಿ ಶಿಲೀಂದ್ರ ನಾಶಕ ಔಷಧ ಸಿಂಪಡಿಸಬೇಕು. ಈ ಸಂಬಂಧ ಈಗಾಗಲೇ ಇಲಾಖೆಯಿಂದ ಸೂಕ್ತ ಪ್ರಚಾರ ಕೈಗೊಳ್ಳಲಾಗಿದೆ. ಚಂಡೆ ಕೊಳೆರೋಗ ಬಂದರೆ ರೈತರಿಗೆ ತೀವ್ರತರದ ನಷ್ಟ ಸಂಭವಿಸುವುದರಿಂದ ರೈತರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ 36,482 ರೈತರು ನೋಂದಣಿ ಮಾಡಿರುವುದಾಗಿ ಅವರು ತಿಳಿಸಿದರು.