ನವದೆಹಲಿ, ಡಿ.26- ಅದೇಶ್ ಕುಮಾರ್ (25), ಶೈಲೇಂದ್ರ ಕುಮಾರ್ (22), ಸುಬೋಧ್ ರಾಯ್ (34), ಮಿಥುನ್ ಕುಮಾರ್ (22), ಸನೋಜ್ ಕುಮಾರ್ (22) ಹಾಗೂ ಜಯೇಶ್ ಪಟೇಲ್ ಬಂಧಿತರು. ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಮೌಲ್ಯದ 28 ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧೆಡೆ ಇವರು ಮಾರಾಟ ಮಾಡಿರುವ ಇನ್ನೂ ಅನೇಕ ಟ್ಯಾಪ್ಟಾಪ್ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳನ್ನೂ ಜಪ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸರಕು ಸಾಗಣೆ ಕಂಪನಿಯೊಂದರ ವ್ಯವಸ್ಥಾಪಕ ಸಂದೀಪ್ ಶರ್ಮ ಡಿ.18ರಂದು ಓಕ್ಲಾ ಇಂಡಸ್ಟ್ರಿಯಲ್ ಏರಿಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗುರ್ಗಾಂವ್ನ ಗೋದಾಮಿಗೆ ರವಾನಿಸಲು ಓಕ್ಲಾದ ತಮ್ಮ ಉಗ್ರಾಣದಿಂದ ವಾಹನಕ್ಕೆ 140 ಲ್ಯಾಪ್ಟಾಪ್ಗಳನ್ನು ಭರ್ತಿ ಮಾಡಲಾಗಿತ್ತು. ನೌಕೆಯಿಂದ ರವಾನಿಸಲಾದ ಈ ಸರಕನ್ನು ತಪಾಸಣೆ ಮಾಡಿದಾಗ 38 ಲ್ಯಾಪ್ಟಾಪ್ಗಳು ಮತ್ತು ಅವುಗಳ ಚಾರ್ಜರ್ಗಳು ನಾಪತ್ತೆಯಾಗಿವೆ. ಆ ಜಾಗಗಳಲ್ಲಿ ಸೆರಾಮಿಕ್ ಟೈಲ್ಸ್ಗಳನ್ನು ಇಟ್ಟು ಲ್ಯಾಪಿಗಳನ್ನು ಕಳವು ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಖದೀಮರ ಸೆರೆಗಾಗಿ ಕಾರ್ಯಾಚರಣೆ ನಡೆಸಿದ ಎಸಿಪಿ ಕಲ್ಕಾಜಿ ಅಮಿತ್ ಗೋಯಲ್ ನೇತೃತ್ವದ ತಂಡವು ಕಾರ್ಗೋ ಕಂಪನಿಯ ಉದ್ಯೋಗಿಗಳೇ ಇದರಲ್ಲಿ ಷಾಮೀಲಾಗಿದ್ದಾರೆ ಎಂಬ ಗುಮಾನಿ ಮೇಲೆ ಕೆಲವು ದಾಖಲೆಗಳನ್ನು ಪರಿಶೀಲಿಸಿದಾಗ ಅನುಮಾನದ ಮುಳ್ಳು ಟ್ರಕ್ ಚಾಲಕ ಆದೇಶ್ ಕುಮಾರ್ನತ್ತ ನೆಟ್ಟಿತು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಖದೀಮರ ಬಣ್ಣ ಬಯಲಾಯಿತು. ಇವರು ಮೊಹರಾದ ಬಾಕ್ಸ್ಗಳಿಂದ ಲ್ಯಾಪ್ಟಾಪ್ಗಳನ್ನು ಎಗರಿಸಿ ಅಷ್ಟೇ ತೂಕದ ಸೆರಾಮಿಕ್ ಟೈಲ್ಸ್ಗಳನ್ನು ಇಟ್ಟು ಮತ್ತೆ ಸೀಲ್ ಮಾಡಿದ್ದರು. ಇವರು ಕಳವು ಮಾಡಿದ ಲ್ಯಾಪಿಗಳನ್ನು ದೆಹಲಿಯ ಗಫರ್ ಮಾರ್ಕೆಟ್, ಪಾಲಿಕಾ, ನೆಹರು ಪ್ಲೇಸ್ ಮತ್ತು ಲಜ್ಪತ್ ನಗರ್ ಮೊದಲಾದ ಸ್ಥಳಗಳಲ್ಲಿ ಮಾರಾಟ ಮಾಡಿದ್ದರು.